ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಧರ್ಮ, ರಾಷ್ಟ ರಕ್ಷಣೆಗಾಗಿ ಸಮರ್ಪಿಸಿಕೊಂಡ ಹೃದಯ ವೈಶಾಲ್ಯತೆಯುಳ್ಳ ಅಪ್ರತಿಮ ದೇಶಭಕ್ತ ಶಿವಾಜಿ ಮಹಾರಾಜರ ಆದರ್ಶ, ಸ್ವಾಭಿಮಾನವನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕು ಎಂದು ಸನಾತನ ಹಿಂದೂ ಯುವಕ ಮಂಡಳದ ಅಧ್ಯಕ್ಷ ಆದೇಶ ಸವಣೂರ ಹೇಳಿದರು.
ಅವರು ಸೋಮವಾರ ಪಟ್ಟಣದ ಸೊಪ್ಪಿನಕೇರಿ ಓಣಿಯಲ್ಲಿ ಸನಾತನ ಹಿಂದೂ ಯುವಕ ಮಂಡಳ ಮತ್ತು ಛತ್ರಪತಿ ಶಿವಾಜಿ ಅಭಿಮಾನಿ ಬಳಗದಿಂದ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಧರ್ಮ ಮತ್ತು ರಾಷ್ಟಾಭಿಮಾನಕ್ಕೆ ಶಿವಾಜಿ ಮಹಾರಾಜರ ಹೆಸರೇ ಪ್ರೇರಣೆಯಾಗಿದ್ದು, ಹಿಂದವೀ ಸ್ವರಾಜ್ಯದ ಕಲ್ಪನೆಯ ರೂವಾರಿಯಾಗಿದ್ದ ಶಿವಾಜಿಯ ವ್ಯಕ್ತಿತ್ವ ರೂಪಿಸುವಲ್ಲಿ ತಾಯಿ ಜೀಜಾಬಾಯಿ ಪಾತ್ರ ಮಹತ್ವದ್ದಾಗಿದೆ. ಪಾಲಕರು ಮಕ್ಕಳಲ್ಲಿ ಮಹಾನ್ ಪುರುಷರ ಆದರ್ಶಗಳನ್ನು ಬಿತ್ತಬೇಕು. ದೇಶ, ಧರ್ಮದ ಅಭಿಮಾನ-ಸ್ವಾಭಿಮಾನದ ಸಂಕೇತವಾದ ಶಿವಾಜಿಯಂತಹ ಶ್ರೇಷ್ಠ ಪುರುಷರನ್ನು ಜಾತಿ, ಭಾಷೆ, ಗಡಿ, ಧರ್ಮಕ್ಕೆ ಮೀಸಲಾಗಿಸದೇ ಅಂತವರ ಬದುಕನ್ನು ಎಲ್ಲರೂ ಆದರ್ಶವಾಗಿಸಿಕೊಳ್ಳಬೇಕು. ಭಾರತಮಾತೆಯ ರಕ್ಷಣೆಗಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಅವತಾರ ಪುರುಷರನ್ನು ಸ್ಮರಿಸದಿದ್ದರೆ, ಅವರ ಇತಿಹಾಸ ಮರೆತರೆ ಭಾರತೀಯರಾದ ನಾವು ಕೃತಘ್ನರಾದಂತೆ ಎಂದು ಹೇಳಿದರು.
ಈ ವೇಳೆ ಈರಣ್ಣ ಪೂಜಾರ, ದುಂಡಪ್ಪ ಸವಣೂರ, ಪ್ರವೀಣ ಗುಡಗೇರಿ, ಶಿವಾನಂದ ಮೆಕ್ಕಿ, ವಿರೇಶ ಚಿಂಚಲಿ, ಅರುಣ ಮೆಕ್ಕಿ, ದೀಪು ಪಾಟೀಲ, ಕಿರಣ ಚಿಲ್ಲೂರಮಠ, ಅಮಿತ ಗುಡಗೇರಿ, ಯಲ್ಲಪ್ಪಗೌಡ ಪಾಟೀಲ, ಸೋಮು ನರೇಗಲ್, ಮಂಜು ಉಮಚಗಿ, ಕಿರಣ ಗಾಣಿಗೇರ, ಸೋಮು ಗೌರಿ, ಕುಮಾರ ಕಣವಿ, ಪ್ರವೀಣ ಬನ್ನಿಕೊಪ್ಪ, ಗುದ್ನೆಪ್ಪ ಸೊಪ್ಪಿನ, ಚಂದ್ರು ನೀರಲಗಿ, ವೈಭವ ತಿರುಮಲೆ ಮುಂತಾದವರಿದ್ದರು.