ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಕೇಂದ್ರವಾಗಿರುವ ದೂದಪೀರಾಂ ದರ್ಗಾಕ್ಕೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ರವಿವಾರ ಭೇಟಿ ನೀಡಿದರು.
ದೂದಪೀರಾಂರವರ 136ನೇ ಉರುಸು ಮೂರು ದಿನಗಳಿಂದ ಅದ್ದೂರಿಯಾಗಿ ನಡೆಯುತ್ತಿದ್ದು, ದೂದನಾನಾ ಮಹಾತ್ಮರ ಗದ್ದುಗೆಗೆ ಪ್ರಾರ್ಥನೆ ಸಲ್ಲಿಸಿ, ಕಾಣಿಕೆ ಸಮರ್ಪಿಸಿದ ಸಚಿವರು ಮಾತನಾಡಿ, ಲಕ್ಷ್ಮೇಶ್ವರದಲ್ಲಿ ಹಲವಾರು ಮಹಾಪುರುಷರು ಜನ್ಮವೆತ್ತಿದ್ದು, ನಿಜಕ್ಕೂ ಈ ನಾಡು ಪುಣ್ಯಭೂಮಿಯಾಗಿದೆ. ಎಲ್ಲ ಜಾತಿ-ಮತದ ಮಹಾಪುರುಷರು ಇಲ್ಲಿ ಆಗಿಹೋಗಿರುವದರಿಂದ ಇದಕ್ಕೆ ಭಾವೈಕ್ಯತೆಯ ನಾಡೆಂದು ಹೆಸರು ಬಂದಿದೆ. ಸರ್ವರೂ ಒಂದಾಗಿ ಬಾಳಲು ಕರೆನೀಡುವ ಮೂಲಕ ಈ ಲಕ್ಷ್ಮೇಶ್ವರವನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಇದಕ್ಕೊಂದು ಅರ್ಥ ನೀಡಿದ್ದಾರೆ. ಇಂತಹ ಸೌಹಾರ್ದತೆಯ ಸಮರ್ಥ ಪ್ರತಿಪಾದಕರಾಗಿ, ಭಾವೈಕ್ಯತೆಯ ಹರಿಕಾರರಾಗಿ ಅಗ್ರಮಾನ್ಯರಾಗಿರುವ ದೂದಪೀರಾಂ ಮಹಾತ್ಮರ ಉರುಸು ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದ್ದು, ಐತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನ, ಮುಕ್ತಿಮಂದಿರ ಹಾಗೂ ದೂದನಾನಾ ದರ್ಗಾದಿಂದ ಪಟ್ಟಣದ ಕೀರ್ತಿ ಹೆಚ್ಚುವಂತಾಗಿದೆ. ಇಲ್ಲಿನ ಭಾವೈಕ್ಯತೆ ಪರಂಪರೆ ಎಲ್ಲರಿಗೂ ಮಾದರಿಯಾಗಲಿ ಎಂದು ಹೇಳಿದರು.
ಸಚಿವರು ದರ್ಗಾಕ್ಕೆ ಆಗಮಿಸಿದ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಉಪಾಧ್ಯಕ್ಷ ಪೀರದೋಷ ಆಡೂರ, ದರ್ಗಾ ಕಮಿಟಿ ಅಧ್ಯಕ್ಷ ಸುಲೇಮಾನಸಾಬ್ ಕಣಕೆ ಸ್ವಾಗತಿಸಿದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಯುವ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ, ಜಯಕ್ಕ ಕಳ್ಳಿ, ರಾಜಣ್ಣ ಕುಂಬಿ, ಸತೀಶಗೌಡ ಪಾಟೀಲ, ವಿರುಪಾಕ್ಷಪ್ಪ ಪಡಗೇರಿ, ರಾಜು ಮಡಿವಾಳರ, ಎಸ್.ಕೆ. ಹವಾಲ್ದಾರ, ಎಂ.ಎಂ. ಗದಗ, ಮಹೇಶ ಹೊಗೆಸೊಪ್ಪಿನ್, ಈರಣ್ಣ ಅಂಕಲಕೋಟಿ ಮುಂತಾದವರಿದ್ದರು.