ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳ ಕಾಲ ಬಿದ್ದ ಅಧಿಕ ಮಳೆಯಿಂದ ಈರುಳ್ಳಿ ಬೆಳೆಯಲ್ಲಿ ಎಲೆ ಮಚ್ಚೆ ರೋಗ ಹಾಗೂ ಸುರಳಿ ರೋಗಗಳ ಬಾಧೆ ಕಂಡು ಬಂದಿದೆ. ಎಲೆ ಮಚ್ಚೆ ರೋಗ ಬಾಧಿತ ಗಿಡಗಳಲ್ಲಿ ಎಲೆಗಳ ಮೇಲೆ ಚಿಕ್ಕ ನೀರಿನಿಂದಾವೃತವಾದ ಗುಲಾಬಿ ಬಣ್ಣದ ಚುಕ್ಕೆಗಳು ಕಾಣಿಸಿಕೊಂಡು, ವಾತಾವರಣದಲ್ಲಿ ತೇವಾಂಶ ಇದ್ದಾಗ ನೇರಳೆ ಅಥವಾ ಕಂದು ಬಣ್ಣಕ್ಕೆ ತಿರುಗುತ್ತವೆ. ಬಾಧೆ ತೀವ್ರವಾದಂತೆ ಎಲೆ ಸಂಕುಚಿತಗೊಂಡು ಗಿಡಗಳು ಸಾಯುತ್ತವೆ. ಇದರ ಹತೋಟಿಗಾಗಿ 15 ಮಿ.ಲೀ ಡೈಫೆನ್ಕೊನಾಜೋಲ್ 25 ಇ.ಸಿ. ಅಥವಾ 15 ಮಿ.ಲೀ ಹೆಕ್ಸಾಕೋನಾಜೋಲ್ 5 ಇ.ಸಿ. ಔಷಧಿಯನ್ನು ಮತ್ತು 30 ಗ್ರಾಂ ನೀರಿನಲ್ಲಿ ಕರುಗುವ 19:19:19 ಗೊಬ್ಬರವನ್ನು 15 ಲೀ ಸಾಮರ್ಥ್ಯದ ಟಾಕಿಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು.
ಒಂದರಿಂದ ಮೂರು ತಿಂಗಳ ಬೆಳೆಯು ಸುರಳಿ ರೋಗಕ್ಕೆ ಬಹು ಬೇಗನೆ ತುತ್ತಾಗುತ್ತದೆ. ರೋಗದ ಬಾಧೆಗೊಳಗಾದ ಗಿಡವು ಸರಿಯಾಗಿ ಅಭಿವೃದ್ಧಿಯಾಗದೆ. ಎಲೆ ಹಾಗೂ ಕಾಂಡವು ಹಳದಿ ಬಣ್ಣಕ್ಕೆ ತಿರುಗುತ್ತವೆ ಹಾಗೂ ಕಾಂಡದ ಅಸಹಜ ಉದ್ದನೆಯ ಬೆಳವಣಿಗೆಯಾಗಿ ಮುದುಡಿ ತಿರುಗಿದಂತೆ ಕಾಣಿಸುತ್ತದೆ. ತೀವ್ರ ಬಾಧೆಗೊಳಗಾದಾಗ ಗಡ್ಡೆಗಳ ಬೆಳವಣಿಗೆ ಬಹಳಷ್ಟು ಕುಂಠಿತವಾಗಿ ಗಡ್ಡೆಯ ಕೊಳೆಯುವಿಕೆ ಪ್ರಾರಂಭüವಾಗುತ್ತದೆ.
ಇದರ ಹತೋಟಿಗಾಗಿ ರೈತರು ಹೊಲದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಹಾಗೂ 15 ಮಿ.ಲೀ ಅಜಾಕ್ಸಿಸ್ಟ್ರಾಬಿನ್+ಟೆಬುಕೊನಾಜೊಲ್ ಶಿಲೀಂದ್ರ ನಾಶಕ, 1 ಗ್ರಾಂ ಬೋರಾನ್ ಮತ್ತು 60 ಗ್ರಾಂ 0:0:50 ನೀರಿನಲ್ಲಿ ಕರಗುವ ಗೊಬ್ಬರಗಳನ್ನು 15 ಲೀ ಸಾಮರ್ಥ್ಯದ ಟಾಕಿಗೆ ಬೆರೆಸಿ ಸಿಂಪಡಿಸಬೇಕು ಅಥವಾ 90 ಗ್ರಾಂ ಟ್ರೈಕೋಡರ್ಮಾ ಹಾರ್ಜಿಯಾನಮ್, 90 ಗ್ರಾಂ ಬ್ಯಾಸಿಲಸ್ ಸಬ್ಟಿಲಸ್ ಮತ್ತು 90 ಗ್ರಾಂ ಸೂಡೋಮೋನಾಸ್ ಪ್ಲ್ಯೊರೊಸೆನ್ಸ್ ಜೈವಿಕ ಕೀಟನಾಶಕಗಳನ್ನು 15 ಲೀ ಸಾಮರ್ಥ್ಯದ ಟಾಕಿಗೆ ಬೆರೆಸಿ ಸಿಂಪಡಿಸಬೇಕು. ಈ ಶಿಲೀಂಧ್ರನಾಶಕಗಳು ಮೋಡ ಕವಿದ ವಾತವರಣವದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತವೆ.
ಲಘು ಪೋಷಕಾಂಶಗಳ ನಿರ್ವಹಣೆಗಾಗಿ 45 ಗ್ರಾಂ ಲಘು ಪೋಷಕಾಂಶಗಳ ಮಿಶ್ರಣವಾದ ಅರ್ಕಾ ತರಕಾರಿ ಸ್ಪೇಷಲ್, ಒಂದು ಶ್ಯಾಂಪೂ ಮತ್ತು ಒಂದು ನಿಂಬೆಹಣ್ಣಿನ ರಸವನ್ನು 15 ಲೀ ನೀರಿನೊಂದಿಗೆ ಮಿಶ್ರಣಮಾಡಿ 40, 60 ಮತ್ತು 80 ದಿನಗಳ ಬೆಳೆಗೆ ಸಿಂಪಡಿಸುವುದರಿಂದ ಗುಣಮಟ್ಟದ ಗಡ್ಡೆಗಳನ್ನು ಪಡೆಯಬಹುದು.