ಶಿವಮೊಗ್ಗ: ನಗರದ ನೆಹರು ಕ್ರೀಡಾಂಗಣದ ಸಮೀಪದ ಅಮೃತ್ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಲೋಪ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹರ್ನಿಯಾ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ 48 ವರ್ಷದ ದೇವಿ ಬಾಯಿ ಅವರು ಚಿಕಿತ್ಸೆ ಬಳಿಕ ಕೋಮಾಗೆ ಜಾರಿದ್ದು, ಇದಕ್ಕೆ ವೈದ್ಯರು ನೀಡಿದ ‘ಹೈಡೋಸ್’ ಔಷಧಿಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ದೇವಿ ಬಾಯಿ ಅವರನ್ನು ಮಾರ್ಚ್ 11ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಾರ್ಚ್ 12ರ ರಾತ್ರಿ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಕೋಮಾಗೆ ಜಾರಿದ್ದಾರೆ ಎಂದು ತಿಳಿದುಬಂದಿದೆ.
ಆಪರೇಷನ್ಗಿಂತ ಮೊದಲು ಆರೋಗ್ಯವಾಗಿದ್ದ ರೋಗಿ, ವೈದ್ಯರ ನಿರ್ಲಕ್ಷ್ಯದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ರೋಗಿಯ ಅಳಿಯ ಕಾಂತರಾಜ್ ಹಾಗೂ ಸಂಬಂಧಿ ಉಷಾ ನಾಯ್ಕ್ ಆರೋಪಿಸಿದ್ದಾರೆ. ಘಟನೆ ನಡೆದು 12 ದಿನಗಳಾದರೂ ಆಸ್ಪತ್ರೆ ಆಡಳಿತ ಯಾವುದೇ ಜವಾಬ್ದಾರಿ ವಹಿಸಿಲ್ಲ ಎಂಬುದು ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿನ್ನೆಲೆ, ಸಂಬಂಧಿಕರು ಆಸ್ಪತ್ರೆ ಎದುರು ಜಮಾಯಿಸಿ ವೈದ್ಯರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಸರ್ಜನ್ ಡಾ. ಧನಂಜಯ್ ಹಾಗೂ ಜನರಲ್ ಫಿಸಿಷಿಯನ್ ಡಾ. ಮಧುಸೂಧನ್, ರೋಗಿ ಕೋಮಾಗೆ ಜಾರಿರುವುದಕ್ಕೂ ಹರ್ನಿಯಾ ಶಸ್ತ್ರಚಿಕಿತ್ಸೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು, ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು ತಿಳಿದುಬಂದಿದೆ.



