ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಧ್ಯಾನವು ಮನುಷ್ಯನ ದೈಹಿಕ, ಮಾನಸಿಕ ಆರೋಗ್ಯ, ನೆಮ್ಮದಿ, ಶಾಂತಿ ನೀಡುವ ದಿವ್ಯೌಷಧಿಯಾಗಿದೆ ಮತ್ತು ಮಾನವನನ್ನು ಮಹಾದೇವವನ್ನಾಗಿಸುವ ದಿವ್ಯಶಕ್ತಿ ಧ್ಯಾನದಿಂದ ಪ್ರಾಪ್ತವಾಗುತ್ತದೆ ಎಂದು ಬ್ರಹ್ಮಶ್ರೀ ಪ್ರೇಮನಾಥ ಜೀ ಹೇಳಿದರು.
ಅವರು ಪಟ್ಟಣದ ಚಂಬಣ್ಣ ಬಾಳಿಕಾಯಿ ಅವರ ಜಿನ್ನಿಂಗ್ ಮಿಲ್ ಪ್ರಾಂಗಣದಲ್ಲಿ ಗದಗ ಪಿರಾಮಿಡ್ ಸ್ಪಿರಿಚ್ಯುವಲ್ ಸೊಸೈಟಿ ಹಾಗೂ ಲಕ್ಷ್ಮೇಶ್ವರ ಧ್ಯಾನ ಪರಿವಾರದಿಂದ ಮಂಗಳವಾರ ಹಮ್ಮಿಕೊಂಡಿದ್ದ ಧ್ಯಾನ ಮತ್ತು ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧ್ಯಾನ ಮನುಷ್ಯನಲ್ಲಿನ ಭಯ, ದುಃಖ, ಮಾನಸಿಕ ಒತ್ತಡವನ್ನು ಹೋಗಲಾಡಿಸಿ ನಿರ್ಮಲಚಿತ್ತನನ್ನಾಗಿಸುತ್ತದೆ. ಪ್ರಸ್ತುತ ಒತ್ತಡದ ಬದುಕಿನಲ್ಲಿ ಆರೋಗ್ಯಕರ ಜೀವನಕ್ಕಾಗಿ ಧ್ಯಾನ, ಯೋಗಗಳು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗಗಳಾಗಬೇಕು. ದೇಹದಲ್ಲಿ ನಾಡಿ ಮಂಡಲಗಳು ಶುದ್ಧವಾಗಿ ರೋಗಗಳಿಂದ ಮುಕ್ತಿ ಹೊಂದಿ ಜೀವನವನ್ನು ಪ್ರತಿಕ್ಷಣ ಆನಂದದಿಂದ ಸಂಭ್ರಮಿಸಬೇಕು. ಧ್ಯಾನ, ಸತ್ಸಂಗ, ಸಂಸ್ಕಾರದ ಪರಿಣಾಮದಿಂದ ಪರಿಪೂರ್ಣ ಹಾಗೂ ಶ್ರೇಷ್ಠತೆಯ ಬದುಕು ಪ್ರಾಪ್ತಿಯಾಗುತ್ತದೆ. ಸತ್ಸಂಗ ಮತ್ತು ಸಂಸ್ಕಾರವನ್ನೇ ಬಂಡವಾಳವಾಗಿಸಿಕೊಂಡ ವ್ಯಕ್ತಿ ಸಮಾಜದಲ್ಲಿ ಶ್ರೇಷ್ಠತೆಯನ್ನು ಸಾಧಿಸಬಲ್ಲವನಾಗುತ್ತಾನೆ. ಇವು ಸಾತ್ವಿಕ ಮನಸ್ಸುಗಳನ್ನು ಕಟ್ಟಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಹಾಯಕವಾಗುತ್ತವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಪಿರಾಮಿಡ್ ಜ್ಞಾನದಿಂದ ಮನುಷ್ಯ ಆರೋಗ್ಯದಿಂದ ಇರಬಹುದು. ಧ್ಯಾನ-ಸತ್ಸಂಗ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ಸುಖೀ ಜೀವನ ನಡೆಸಬೇಕು ಎಂದು ಹೇಳಿದರು.
ಚಂಬಣ್ಣ ಬಾಳಿಕಾಯಿ, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ಮಾತನಾಡಿದರು. ವಿದ್ಯಾರಾಣಿ ಕೂಬಳ್ಳಿ ಪಿರಾಮಿಡ್ ಧ್ಯಾನದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಘಟಕ ಸುಭಾಷ್ ಓದುನವರ, ನೇತ್ರಾವತಿ ಕಟಗೇರಿ, ಚನ್ನಪ್ಪ ಕೋಲಕಾರ, ಪ್ರಕಾಶ ಉಪನಾಳ, ಐ.ಎಸ್. ಮಡಿವಾಳರ, ಗುರು ಬಾಳಿಹಳ್ಳಿಮಠ, ಮಾಲದೇವಿ ದಂದರಗಿ, ದಿಗಂಬರ ಪೂಜಾರ ಮುಂತಾದವರು ಪಾಲ್ಗೊಂಡಿದ್ದರು.


