ವಿಜಯಸಾಕ್ಷಿ ಸುದ್ದಿ, ಗದಗ : ಜೆಡಿಎಸ್ ಪಕ್ಷವನ್ನು ತಳ ಮಟ್ಟದಿಂದ ಮತ್ತೊಮ್ಮೆ ಸಂಘಟಿಸುವ ಉದ್ದೇಶದೊಂದಿಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸೋಮನಗೌಡ ಪಾಟೀಲ (ಅಪ್ಪಾಜಿಗೌಡ) ಹೇಳಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಪರವಾಗಿರುವ ಏಕೈಕ ಪಕ್ಷವೆಂದರೆ ಅದು ಜೆಡಿಎಸ್ ಮಾತ್ರ. ಅದಕ್ಕಾಗಿ ರಾಜ್ಯದ ಜನರು ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಬಯಸುತ್ತಿದ್ದಾರೆ. ಜನರ ಬಯಕೆಯಂತೆ ಪ್ರತಿ ಬೂತ್ ಮಟ್ಟದಲ್ಲಿಯೂ ಪಕ್ಷವನ್ನು ಸಂಘಟನೆ ಮಾಡಿ, ಮುಂಬರುವ ಜಿ.ಪಂ, ತಾ.ಪಂ ಚುನಾವಣೆಗಳಲ್ಲಿ ಪಕ್ಷವನ್ನು ಅಕಾರಕ್ಕೆ ತರುವ ಪ್ರಯತ್ನವನ್ನು ನಮ್ಮ ಪಕ್ಷದ ಎಲ್ಲಾ ಮುಖಂಡರು ಮಾಡಲಿದ್ದಾರೆ ಎಂದರು.
ನಾಗಠಾಣ ಕ್ಷೇತ್ರದ ಮಾಜಿ ಶಾಸಕ, ಗದಗ ಉಸ್ತುವಾರಿ ದೇವಾನಂದ ಚವಾಣ ಮಾತನಾಡಿ, ಸದಸ್ಯತ್ವ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ನಡೆಯುತ್ತಿದೆ. ಗದಗ ಜಿಲ್ಲೆಗೆ ವಿಶೇಷ ಆದ್ಯತೆ ನೀಡಿ ಪಕ್ಷವನ್ನು ಬಲವರ್ಧನೆ ಮಾಡುವುದಕ್ಕಾಗಿ ಸಂಘಟನೆಗೆ ಒತ್ತು ನೀಡಲಾಗಿದೆ ಎಂದರು.
ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಮಾತನಾಡಿ, ಈ ಹಿಂದೆ ಮನೆ ಮನೆಗೂ ಕುಮಾರಸ್ವಾಮಿ ಕಾರ್ಯಕ್ರಮದ ರೀತಿಯಲ್ಲಿಯೇ ಜೆಡಿಎಸ್ ಸದಸ್ಯತ್ವ ಅಭಿಯಾನ ನಡೆಯಲಿದೆ. ಗದಗ ಮತಕ್ಷೇತ್ರದಲ್ಲಿ ಸುಮಾರು 50 ಸಾವಿರ ಸದಸ್ಯರನ್ನು ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವೈ. ಮುಧೋಳ, ಶಂಕ್ರಣ್ಣ ಬಾಳಿಕಾಯಿ, ಮಂಜುಳಾ ಮೇಟಿ, ಜೋಸೆಫ್ ಉದೋಜಿ, ದೇವೇಂದ್ರಪ್ಪ ಮಲ್ಲಸಮುದ್ರ, ಎಂ.ಎಸ್. ಪರ್ವತಗೌಡ್ರ, ಪ್ರಫುಲ್ ಪುಣೇಕರ, ಪ್ರವೀಣ ಬಾಳಿಕಾಯಿ, ಮಂಜುನಾಥ ದೊಡ್ಡಮನಿ, ಸಿದ್ದಣ್ಣ ಹೊಂಬಾಳಿಮಠ, ಆನಂದ ಹಂಡಿ ಮುಂತಾದವರು ಹಾಜರಿದ್ದರು.