ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ವಿದ್ಯಾ ಸಂಪತ್ತು ಎಲ್ಲಕ್ಕಿಂತ ಮಿಗಿಲಾದ ಮತ್ತು ಯಾರೂ ಕದಿಯಲಾರದ ಶಾಶ್ವತ ಸಂಪತ್ತಾಗಿದೆ. ವಿದ್ಯೆ ಎಂಬ ಅಸ್ತçದಿಂದ ಸಮಾಜದ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ ಎಂದು ಶಿರಹಟ್ಟಿ ಮತಕ್ಷೇತ್ರ ಸಮಗ್ರ ಅಭಿವೃದ್ಧಿ ವೇದಿಕೆ ತಾಲೂಕಾಧ್ಯಕ್ಷ ಗುರುನಾಥ ದಾನಪ್ಪನವರ ಹೇಳಿದರು.
ಅವರು ಕರ್ನಾಟಕ ರಾಜ್ಯ ಮಾದಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘ ಲಕ್ಷೇಶ್ವರ ತಾಲೂಕು ಘಟಕದಿಂದ ಪಟ್ಟಣದಲ್ಲಿ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕುಗಳ ಮಾದಿಗ ಸಮಾಜದ ಎಸ್ಎಸ್ಎಲ್ಸಿ, ಪಿಯುಸಿ, ಪದವೀಧರ ಮತ್ತು ನಿವೃತ್ತ ಹಾಗೂ ನೂತನ ನೌಕರರಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಹಿತಿ, ಶಿಕ್ಷಕ ನಾಗೇಂದ್ರ ಪಿ ಉಪನ್ಯಾಸ ನೀಡಿ, ಸಮಾಜದ ಬಗ್ಗೆ ಕೀಳರಿಮೆ ಬೇಡ. ಮಾದಿಗ ಸಮಾಜ ಹಿಂದಿನ ಕಾಲದಿಂದಲೂ ಸಮಾಜ ಸೇವೆ, ಕೃಷಿ, ಸಾಹಿತ್ಯ, ಸಂಗೀತ, ಶಿಕ್ಷಣ ಎಲ್ಲ ಕ್ಷೇತ್ರಗಳಲ್ಲಿ ವಿಶೇಷವಾದ ಸೇವೆ, ಸಾಧನೆ ಮಾಡುತ್ತಾ ಬಂದಿದೆ. ಸಮಾಜ ನಮಗೇನು ಮಾಡಿದೆ ಎನ್ನುವ ಬದಲು ಸಮಾಜಕ್ಕಾಗಿ ನಾನೇನು ಮಾಡಿದ್ದೇನೆ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಮನುಷ್ಯ ಯಾವ ಸಮಾಜ ತನ್ನ ಉನ್ನತಿ, ಶ್ರೇಯಸ್ಸಿಗಾಗಿ ಶ್ರಮಿಸಿರುತ್ತದೆಯೋ ಅದರ ಋಣ ತೀರಿಸುವ ನೈತಿಕ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ಅರಿತುಕೊಂಡಾಗ ಮಾತ್ರ ಸಮಾಜ ಇನ್ನಷ್ಟು ವಿಶಾಲವಾಗಿ ಬೆಳೆಯಲು ಸಾಧ್ಯ ಎಂದರು.
ಬಿಇಓಗಳಾದ ಆರ್.ಎಸ್. ಬುರಡಿ, ವಿ.ವಿ. ನಡುವಿನಮನಿ, ವಿಶೇಷ ತಹಸೀಲ್ದಾರ ಎಂ.ಜಿ. ದಾಸಪ್ಪನವರ ಮಾತನಾಡಿದರು.
ಸಂಘದ ತಾಲೂಕು ಘಟಕದ ಅಧ್ಯಕ್ಷ ಆರ್.ಎಫ್. ದೊಡ್ಡಮನಿ ಅಧ್ಯಕ್ಷತೆ ವಹಿಸಿಸಿದ್ದರು. ಎ.ಡಿ. ಸೋಮನಕಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಡಿ. ತಿರಕಪ್ಪನವರ, ಈರಣ್ಣ ಮಾದರ, ಸುರೇಶ ಬೀರಣ್ಣವರ ಇದ್ದರು. ಎರಡೂ ತಾಲೂಕುಗಳ ಮಾದಿಗ ಸಮಾಜದ ಎಸ್ಎಸ್ಎಲ್ಸಿ, ಪಿಯುಸಿ, ಪದವೀಧರ ವಿದ್ಯಾರ್ಥಿಗಳಿಗೆ ಬ್ಯಾಗ್, ಸಂವಿಧಾನ ಪುಸ್ತಕ, ಅಭಿನಂಧನಾ ಪತ್ರ, ನಗದು ಬಹುಮಾನದೊಂದಿಗೆ ಸನ್ಮಾನಿಸಲಾಯಿತು. ನಿವೃತ್ತ ಹಾಗೂ ನೂತನ ನೌಕರರನ್ನು ಸನ್ಮಾನಿಸಲಾಯಿತು. ಎಚ್.ಬಿ. ಸಣ್ಣಮನಿ, ಬಿ.ಎಚ್. ನಡುವಿನಮನಿ, ಸಿ.ಎಸ್. ಕರ್ಜಗಿ, ಎನ್.ಡಿ. ಮೇಗಿಲಮನಿ ನಿರ್ವಹಿಸಿದರು.
ಸಮಾಜ ಬಾಂಧವರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು. ಶಿಕ್ಷಣ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತರು, ಸಾಧಕರನ್ನು ಪುರಸ್ಕರಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಬಡ ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸಮಾಜದ ಸ್ಥಿತಿವಂತರು ಸಹಾಯ-ಸಹಕಾರ ನೀಡು ವ ಮೂಲಕ ಸಮಮಾಜದ ಪ್ರತಿಭೆಗಳು ಬೆಳಗುವಂತೆ ಮಾಡಬೇಕು ಎಂದು ಗುರುನಾಥ ದಾನಪ್ಪನವರ ತಿಳಿಸಿದರು.