ವಿಜಯಸಾಕ್ಷಿ ಸುದ್ದಿ, ಗದಗ : ಉನ್ನತಿ ಟ್ಯುಟೋರಿಯಲ್ ನಗರದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಅತ್ಯುತ್ತಮ ಕೋಚಿಂಗ್ ಕೇಂದ್ರವಾಗಿದೆ. ಪ್ರತಿ ವರ್ಷ ಹಲವಾರು ವಿದ್ಯಾರ್ಥಿಗಳು ಈ ಟ್ಯುಟೋರಿಯಲ್ನಲ್ಲಿ ಕೋಚಿಂಗ್ ಪಡೆದು ಉತ್ತಮ ಅಂಕ ಪಡೆದು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರ್ಯಾಂಕ್ ಗಳಿಸುತ್ತಿದ್ದಾರೆ.
ಇಲ್ಲಿ ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಶಿಸ್ತು, ನಡತೆ, ವ್ಯವಸ್ಥಿತ ಓದುವ ಕ್ರಮ, ದೈಹಿಕ ಹಾಗೂ ಮಾನಸಿಕ ಪ್ರಬುದ್ಧತೆಯ ಜ್ಞಾನದ ಧಾರೆಯನ್ನು ಎರೆಯುತ್ತಿದ್ದಾರೆ ಎಂದು ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಉನ್ನತಿ ಟ್ಯುಟೋರಿಯಲ್ ವತಿಯಿಂದ 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಅಂಕ ಗಳಿಕೆ ಒಂದಿದ್ದರೆ ಮಾತ್ರ ಜೀವನ ಪರಿಪೂರ್ಣ ಅಲ್ಲ. ಜೊತೆಗೆ ಉತ್ತಮ ವ್ಯಕ್ತಿತ್ವ ಬೇಕು, ಅಂಕದ ಜೊತೆಗೆ ವಿನಯವೂ ಬೇಕು. ನಾವು ದಿನನಿತ್ಯ ಕಲಿಯುತ್ತಲೇ ಇರಬೇಕು. ಅದಕ್ಕಾಗಿ ಕಣ್ಣು, ಕಿವಿ ತೆರೆದಿಡಬೇಕು. ನಾವು ಯಾರಿಂದಲೂ ಕಲಿಯಲು ಇಲ್ಲ ಎನ್ನುವ ಮನಸ್ಥಿತಿ ಇರಬಾರದು ಎಂದ ಅವರು, ನಾವು ಉತ್ತಮ ಮನುಷ್ಯ ಎಂದೆನಿಸಿಕೊಳ್ಳುವುದು ಬಹುದೊಡ್ಡ ಕಾರ್ಯ, ಅಂತಹ ಕಾರ್ಯ ಈ ಟ್ಯುಟೋರಿಯಲ್ನಲ್ಲಿ ಕೋಚಿಂಗ್ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಸಿಗುತ್ತಲಿದೆ ಎಂದರು.
ಟ್ಯುಟೋರಿಯಲ್ ಸಂಸ್ಥಾಪಕರು ಹಾಗೂ ಶಿಕ್ಷಕಿಯರಾದ ರಶ್ಮಿ ಜನ್ನಾ ಹಾಗೂ ವೀಣಾ ಬಾಳಿಹಳ್ಳಿಮಠ ಟ್ಯುಟೋರಿಯಲ್ ಬೆಳೆದುಬಂದ ಹಿನ್ನೆಲೆ ಹಾಗೂ ಸಾಧನೆ ಕುರಿತು ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕುಬೇರ ಸೂಡಿ ಹಾಗೂ ಚೇತನ್ ಆಲೂರ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ರ್ಯಾಂಕ್ ಪಡೆದ ವಿದ್ಯಾರ್ಥಿಗಳಾದ ರೇವತಿ ಉತ್ತರಕರ್, ವಿನುತಾ ಕಬ್ಬಿನ, ಸವಿತಾ ಹಳ್ಳಿ, ತಯ್ಯಾಬ ಖಾಜಿ, ಸ್ನೇಹಾ ರುದ್ರಾಪುರಮಠ ಹಾಗೂ ನೇತ್ರಾ ಹಿರೇಮಠ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗರದ ಸಂಕನೂರ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಿಂದ ಕೊಡಮಾಡಲ್ಪಟ್ಟ ನಗದು ಬಹುಮಾನವನ್ನು ವಿತರಿಸಲಾಯಿತು.
ಶ್ರೇಯಾ ಚವಡಿ ಹಾಗೂ ಅನುಷಾ ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ಜಿಯಾ ಹಾಗೂ ವೈಷ್ಣವಿ ಅತಿಥಿಗಳನ್ನು ಪರಿಚಯಿಸಿದರು. ಶ್ರೇಯ ಚವಡಿ ನಿರೂಪಿಸಿದರು. ಪ್ರೀತಮ್ ಪಟ್ಟೆದ ವಂದಿಸಿದರು.
ಸೈಬರ್ ಕ್ರೈಂ ಅಧಿಕಾರಿ ನಾಮದೇವ್ ಬಸವರಾಜ ಪಾಸ್ತೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಸೈಬರ್ ಜಗತ್ತಿನಲ್ಲಿ ಆಗುತ್ತಿರುವ ಅಪರಾಧಗಳ ಕುರಿತು ಮಾಹಿತಿ ನೀಡಿ, ಎಲ್ಲಾ ಪಾಲಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಮಕ್ಕಳು ಅತಿ ಹೆಚ್ಚು ಮೊಬೈಲಿಗೆ ವ್ಯಸನರಾಗದಂತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾಗವಹಿಸದಂತೆ ಎಚ್ಚರ ವಹಿಸಬೇಕು. ಇತ್ತೀಚೆಗೆ ಛಾಯಾಚಿತ್ರಗಳನ್ನು ಎಡಿಟ್ ಮಾಡಿ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಇಂತಹ ಸಮಸ್ಯೆಗಳು ಎದುರಾದಾಗ ಹಾಗೂ ದೂರು ಕೊಟ್ಟಾಗ ಅವರ ಹತ್ತಿರದವರೇ ಮೋಸ ಮಾಡಿದ್ದಾರೆಂದು ತಿಳಿದು ಬರುತ್ತದೆ. ಆದಷ್ಟು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಹಾಗೂ ನಿಮಗೂ ಮತ್ತು ನಿಮ್ಮ ಸುತ್ತಮುತ್ತಲಿನ ಯಾರಿಗಾದರೂ ಈ ರೀತಿ ಸಮಸ್ಯೆಗಳು ಉಂಟಾದರೆ ಕೂಡಲೇ ನಮ್ಮನ್ನು ಸಂಪರ್ಕಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.