ಬೆಂಗಳೂರು: ಯೆಲ್ಲೋ ಲೈನ್ ಬೆಂಗಳೂರಿನ ಕನಿಷ್ಠ 8 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಹಳದಿ (ಯೆಲ್ಲೋ) ಮೆಟ್ರೋ ಲೈನ್ ಅನ್ನು ಇದೇ 10ರಂದು ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಯೆಲ್ಲೋ ಲೈನ್ ಕನಿಷ್ಠ 8 ಲಕ್ಷ ಜನರಿಗೆ ಅನುಕೂಲ ಒದಗಿಸಲಿದೆ ಎಂದರು.
ಪ್ರಧಾನಿಯವರು ಬೆಳಿಗ್ಗೆ ಬೆಂಗಳೂರಿಗೆ ಬರಲಿದ್ದು, ಹೆಲಿಕಾಪ್ಟರ್ ಮೂಲಕ ಮೇಖ್ರಿ ವೃತ್ತದ ಬಳಿ ಇರುವ ಮಿಲಿಟರಿ ಮೈದಾನಕ್ಕೆ ಆಗಮಿಸುವರು. ಬಳಿಕ ಮೇಖ್ರಿ ವೃತ್ತ, ಚಾಲುಕ್ಯ ವೃತ್ತ ಮೂಲಕ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ಗೆ ಬಂದು ತಲುಪುವರು. ಅಲ್ಲಿ ಬೆಂಗಳೂರು- ಬೆಳಗಾವಿ ನಡುವಿನ ವಂದೇ ಭಾರತ್ ರೈಲಿನ ಉದ್ಘಾಟನೆ ನೆರವೇರಿಸುವರು ಎಂದು ವಿವರಿಸಿದರು.
ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ನಿಂದ ಸೌತ್ ಎಂಡ್ ವೃತ್ತದ ಮೂಲಕ ರಾಗಿಗುಡ್ಡ ತಲುಪುವರು. ಇಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್ನಲ್ಲೂ ಕಾರ್ಯಕ್ರಮ ಇದೆ. ಪ್ರಧಾನಿಯವರು ಬರುವ ಸಂದರ್ಭವನ್ನು ಬೆಂಗಳೂರಿನ ಮಹಾಜನತೆ ಕಾತುರದಿಂದ ಕಾಯುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರೂ ಪ್ರಧಾನಿಯವರನ್ನು ಬಹಳ ಸಂತೋಷದಿಂದ ಸ್ವಾಗತಿಸಲು ಸಿದ್ಧರಾಗಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾಗುವ ನಿಟ್ಟಿನಲ್ಲಿ ಬೆಂಗಳೂರಿನ ಮಹಾಜನತೆ ಕೈಜೋಡಿಸಬೇಕೆಂದು ವಿನಂತಿಸಿದರು.