ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಶ್ರೀಮಾನ್ ಬಿ.ಡಿ. ತಟ್ಟಿ ಅಣ್ಣಾವರು ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ವಿಶೇಷ ಚೇತನ ಮಕ್ಕಳ ವಸತಿಯುತ ಶಾಲೆಯಲ್ಲಿ ವಿಶ್ವ ಧ್ಯಾನ ದಿನಾಚರಣೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಹುಬ್ಬಳ್ಳಿಯ ಧ್ಯಾನ ಪರಿಣಿತೆ ಗುರುಮಾತೆ ಪೂರ್ಣಿಮಾ ಅಣ್ಣಪ್ಪನವರ ಉದ್ಘಾಟಿಸಿ ಮಾತನಾಡಿ, ಧ್ಯಾನ ಎಂದರೆ ಮುಕ್ತಿ. ನಮ್ಮ ದೇಹದ ಮೇಲಿನ ನಿಯಂತ್ರಣಕ್ಕೆ ಧ್ಯಾನ ಅತ್ಯಂತ ಉಪಯುಕ್ತವಾಗಿದೆ. ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟು ಧ್ಯಾನ ಮಗ್ನರಾದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಧ್ಯಾನದಿಂದ ಮನಸನ್ನು ನಿಯಂತ್ರಿಸಲು ಸಾಧ್ಯ. ಅಲ್ಲದೆ ಇದರಿಂದ ಮೆದುಳಿನ ಮೇಲೆಯೂ ವಿಶೇಷ ಪರಿಣಾಮ ಬೀರುತ್ತದೆ. ಮಕ್ಕಳಿಗೆ ಇದು ಹೆಚ್ಚು ಉಪಯೋಗವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಗೌರವ ಕಾರ್ಯದರ್ಶಿ ಸೋಮನಾಥ ಮಹಾಜನಶೆಟ್ಟರ ಮಾತನಾಡಿ, ಮಕ್ಕಳ ಮನಸ್ಸು ನಿಯಂತ್ರಣದಲ್ಲಿರಬೇಕಾದರೆ ಧ್ಯಾನ ಅತಿ ಮುಖ್ಯ. ಧ್ಯಾನದಿಂದ ಮಕ್ಕಳಲ್ಲಿ ಜ್ಞಾನ ಅಭಿವೃದ್ಧಿಯಾಗುತ್ತದೆ ಎಂದರು.
ಓಂ ಶಾಂತಿ ಈಶ್ವರಿಯ ವಿದ್ಯಾಲಯದ ನಾಗಲಾಂಬಿಕೆ ಅಕ್ಕನವರು ಮಾತನಾಡಿ, ಯೋಗ ಎಂದರೆ ಮನಸ್ಸು ಮತ್ತು ಬುದ್ಧಿಯನ್ನು ಸ್ಥಿರವಾಗಿಸುವುದು. ಧ್ಯಾನ ಮಾಡುವುದರಿಂದ ಮನಸ್ಸಿನ ಆಂತರಿಕ ಸಂತೋಷ ಹೆಚ್ಚಾಗುತ್ತದೆ. ದೇಗುಲ ಎಂಬ ಸಂಸ್ಥೆಯಲ್ಲಿ ಪರಮಾತ್ಮನ ರೂಪದಲ್ಲಿ ವಿಶೇಷ ಚೇತನ ಮಕ್ಕಳ ಸೇವೆಯನ್ನು ಮಾಡುತ್ತಿರುವ ಈ ಸಂಸ್ಥೆಯ ಗೌರವ ಕಾರ್ಯದರ್ಶಿಯವರ ಕಾರ್ಯ ಶ್ಲಾಘನೀಯ ಎಂದರು.
ಇನ್ನೋರ್ವ ಅತಿಥಿ ಶೀಲಾ ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಧ್ಯಾನ ಸಮಿತಿಯ ಸದಸ್ಯರುಗಳಾದ ಸುಭಾಷ ಓದುನವರ, ಜಿ.ಎಸ್. ಬಾಳೆಹಳ್ಳಿಮಠ, ಶಶಿಕಲಾ ವಡಕಣ್ಣವರ, ವೀಣಾ ಹತ್ತಿಕಾಳ ಭಾಗವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯೆ ಜಯಶ್ರೀ ಶೆಟ್ಟರ, ಶಿಕ್ಷಕಿ ಪ್ರತಿಮಾ ಮಹಾಜನ್ಶೆಟ್ಟರ, ಶಿಕ್ಷಕ ಜಿ.ಪಿ. ಪವಾರ ಉಪಸ್ಥಿತರಿದ್ದರು. ಸುಮಾ ಶೆಟ್ಟರ ಸ್ವಾಗತಿಸಿದರು, ಗೀತಾ ಬಾಳೋಜಿ ಕಾರ್ಯಕ್ರಮ ನಿರೂಪಿಸಿದರು, ಅಕ್ಷತಾ ವಂದಿಸಿದರು. ಲಕ್ಷ್ಮೀ ರಬ್ಬನಗೌಡ್ರ ಕಾರ್ಯಕ್ರಮ ಅನುವಾದಿಸಿದರು.



