ಚಿಕ್ಕಬಳ್ಳಾಪುರ: ರಾಜ್ಯದ ಮೆಕ್ಕೆಜೋಳದ ವ್ಯಾಪಾರಿ ಹಾಗೂ ರೈತರಿಗೆ ಸಹಕಾರ ನೀಡುವ ಬದಲು ತೆಲಂಗಾಣದ ಉದ್ಯಮಿಗಳಿಗೆ ಬೆಂಬಲ ನೀಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹಮದ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಪೇರೇಸಂದ್ರದ ರೈತ ಮತ್ತು ವ್ಯಾಪಾರಿ ರಾಮಕೃಷ್ಣ ಅಲಿಯಾಸ್ ಜೊನ್ನಲ ಕಿಟ್ಟಿ, ಸಚಿವರ ನಡೆಗೆ ಖಂಡನೆ ವ್ಯಕ್ತಪಡಿಸಿ ನಾಟಕೀಯ ರೀತಿಯಲ್ಲಿ ರಕ್ತದಲ್ಲಿ “ಡೆತ್ ನೋಟ್” ಬರೆದು ತಂದರು. “ಸಚಿವ ಜಮೀರ್ ಅಹಮದ್ ನನ್ನ ಸಾವಿಗೆ ಕಾರಣ, ನನಗೆ ನ್ಯಾಯ ಸಿಗದಿದ್ದರೆ ವಿಷ ಕುಡಿದು ಸಾಯ್ತೀನಿ” ಎಂದು ಕಣ್ಣೀರಿಡುತ್ತಾ ಅವರು ನೇರವಾಗಿ ಸಚಿವರ ಎದುರು ಅಳಲು ವ್ಯಕ್ತಪಡಿಸಿದರು.
ರಾಮಕೃಷ್ಣ ಅವರು ಕಳೆದ ಕೆಲ ತಿಂಗಳ ಹಿಂದೆ ಹೈದರಾಬಾದ್ನ ಉದ್ಯಮಿಗಳಾದ ಅಕ್ಬರ್, ಸದ್ದಾಂ ಹಾಗೂ ನಾಸೀರ್ ಅವರಿಗೆ ₹1.89 ಕೋಟಿ ಮೆಕ್ಕೆಜೋಳ ಮಾರಾಟ ಮಾಡಿದ್ದರು. ಆದರೆ ಹಣ ಪಾವತಿಯಾಗದೇ ಹೋದ ಹಿನ್ನೆಲೆಯಲ್ಲಿ ಅವರು ದೂರು ನೀಡಿದ್ದರು. ಈ ಪ್ರಕರಣದಲ್ಲಿ ಆರೋಪಿಗಳನ್ನು ಪೇರೇಸಂದ್ರ ಪೊಲೀಸರು ಬಂಧಿಸಿದಾಗ, ಸಚಿವ ಜಮೀರ್ ಅಹಮದ್ ಅವರು ಮಧ್ಯಸ್ಥಿಕೆ ವಹಿಸಿ “ಅವರು ನಮ್ಮ ಪರಿಚಯದವರು, ಸ್ವಲ್ಪ ಸಮಯ ಕೊಡಿ ಸೆಟಲ್ ಆಗುತ್ತೆ” ಎಂದು ಹೇಳಿದ ಆಡಿಯೋ ಕ್ಲಿಪ್ ಒಂದು ವಾರದ ಹಿಂದೆ ವೈರಲ್ ಆಗಿತ್ತು.
ಇದನ್ನೆ ಮುಂದುವರಿಸಿ ಇಂದು ಚಿಕ್ಕಬಳ್ಳಾಪುರದ ಷಾದಿ ಮಹಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರ ಎದುರೇ ರಾಮಕೃಷ್ಣ ರಕ್ತದಲ್ಲಿ ಬರೆದ ಪತ್ರ ತೋರಿಸಿ “ನನಗೆ ಹಣ ಕೊಡಿಸಿ ಇಲ್ಲ ಅಂದ್ರೆ ನಾನು ಸಾಯ್ತೀನಿ” ಎಂದು ಭಾವನಾತ್ಮಕವಾಗಿ ಕಣ್ಣೀರು ಹಾಕಿದರು.
ಸ್ಥಳದಲ್ಲಿದ್ದ ಪೊಲೀಸರು ಅವರನ್ನು ಸಮಾಧಾನಪಡಿಸಿ ಹೊರಕ್ಕೆ ಕರೆದುಕೊಂಡು ಹೋದರು. ನಂತರ ಘಟನೆಯ ಬಗ್ಗೆ ಮಾತನಾಡಿದ ಸಚಿವ ಜಮೀರ್ ಅಹಮದ್, “ನಾನು ರೈತರಿಗೆ ಅನ್ಯಾಯ ಆಗಲು ಬಿಡೋದಿಲ್ಲ. ನಾಳೆ ತೆಲಂಗಾಣದ ಉದ್ಯಮಿಗಳನ್ನ ಕರೆಸಿ ಹಣ ಸೆಟ್ಲ್ ಆಗುವಂತೆ ನೋಡಿಕೊಳ್ಳುತ್ತೇನೆ” ಎಂದು ಸ್ಪಷ್ಟನೆ ನೀಡಿದರು.


