ಪ್ರಯಾಗ್ ರಾಜ್:- ಬರೋಬ್ಬರಿ 144 ವರ್ಷಗಳ ಬಳಿಕ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಇಂದು ಜೋಶಿ ಕುಟುಂಬ ಭಾಗಿಯಾಗಿದ್ದು, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.
ತ್ರಿವೇಣಿ ಸಂಗಮದ ಪವಿತ್ರ ಗಂಗೆಯಲ್ಲಿ ಮುಳುಗೇಳುತ್ತಾ ತೀರ್ಥಸ್ನಾನ ಮಾಡಿದ ಸಚಿವರು, ಮಂತ್ರ ಪಠಣದೊಂದಿಗೆ ದೇವರಿಗೆ ನಮಸ್ಕರಿಸಿ, ಲೋಕದ ಸುಭಿಕ್ಷೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕುಟುಂಬ ಸಮೇತರಾಗಿ ವಿಶಿಷ್ಠ ಭಂಗಿಯ ಭಗವಾನ್ ಹನುಮ ದೇವಾಲಯ ಹಾಗೂ ಅಕ್ಷಯವತ್ಗೆ ತೆರಳಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಮಹಾ ಕುಂಭಮೇಳದಲ್ಲಿ ಸಚಿವ ಪ್ರಹ್ಲಾದ್ ಜೋಶಿ ಅವರ ಇಡೀ ಕುಟುಂಬವೇ ಭಾಗಿಯಾಗಿ ಶ್ರದ್ಧಾಭಕ್ತಿ ಮೆರೆಯಿತು. ಸಚಿವರೊಂದಿಗೆ ಪತ್ನಿ ಜ್ಯೋತಿ ಜೋಶಿ, ಮಕ್ಕಳಾದ ಅರ್ಪಿತಾ ಜೋಶಿ, ಅನನ್ಯಾ ಜೋಶಿ, ಅನುಷಾ ಜೋಶಿ ಹಾಗೂ ಸಹೋದರ ಗೋವಿಂದ ಜೋಶಿ-ಕಮಲಾ ಜೋಶಿ ದಂಪತಿ ಸೇರಿದಂತೆ ಮಕ್ಕಳು, ಮೊಮ್ಮಕ್ಕಳಾದಿಯಾಗಿ ಕುಟುಂಬದ ಸದಸ್ಯರೆಲ್ಲರೂ ಪುಣ್ಯಸ್ನಾನ ಗೈದು ಭಕ್ತಿ ಸಮರ್ಪಿಸಿದರು.
ಈ ವೇಳೆ ಪ್ರಯಾಗರಾಜ್ನಲ್ಲಿ ಮಾಧ್ಯಮಗಳೊಂದಿಗೆ ಮಹಾಕುಂಭದ ಅನನ್ಯ ಅನುಭವವನ್ನು ಹಂಚಿಕೊಂಡ ಜೋಶಿ, ಪ್ರಯಾಗ್ರಾಜ್ ಮಹಾ ಕುಂಭಮೇಳ ಹಿಂದೂ ಧರ್ಮದ ಒಂದು ಸಾಮೂಹಿಕ ತೀರ್ಥಯಾತ್ರೆಯಾಗಿ ಯಶಸ್ವಿಯಾಗಿ ಜರಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.