ಬೆಂಗಳೂರು:- ಮುಸ್ಲಿಮರಿಗೆ ಮೀಸಲಾತಿ ವಿಚಾರದಲ್ಲಿ ತಪ್ಪು ಗ್ರಹಿಕೆ ಆಗಿದೆ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸರ್ಕಾರದ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ತಪ್ಪು ಗ್ರಹಿಕೆ ಆಗಿದೆ. ಈ ವಿಚಾರವಾಗಿ ಸಿಎಂಗೆ ಕೆಲವು ಶಾಸಕರು, ಮುಖಂಡರು ಮನವಿ ಪತ್ರ ಸಲ್ಲಿಸಿದ್ದರು. ಆ ಪತ್ರ ಪರಿಶೀಲನೆಗೆ ಅಲ್ಪಸಂಖ್ಯಾತ ಇಲಾಖೆಗೆ ಸಿಎಂ ಸೂಚನೆ ನೀಡಿದ್ದರು. ಇಷ್ಟು ಬಿಟ್ಟರೆ ಬೇರೇನೂ ಆಗಿಲ್ಲ. ಏನೇ ತೀರ್ಮಾನ ಆದರೂ ಸಂಪುಟ ಸಭೆಯಲ್ಲಿ ಆಗಬೇಕು. ಪರಿಶೀಲನೆ ಮಾಡಿ ಎಂದು ಹೇಳಿದ ತಕ್ಷಣ ತೀರ್ಮಾನ ಆದಂತೆ ಅಲ್ಲ ಎಂದು ಅವರು ಹೇಳಿದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ಗೆ ಶಿಫಾರಸು ವಿಚಾರವಾಗಿ ಪ್ರತಿಕ್ರಿಯಿಸಿ, ಕೋವಿಡ್ ಕಾಲದಲ್ಲಿ ನಡೆದ ಅಕ್ರಮಗಳಿಗೆ ಬೇರೆ ಬೇರೆ ಆಯಾಮವಿದೆ. ಬೆಡ್, ಔಷಧ, ಪಿಪಿಇ ಕಿಟ್, ಟೆಸ್ಟ್ ಕಿಟ್ ಖರೀದಿ ವಿಚಾರಗಳಿವೆ. ಸಂಪುಟ ಉಪಸಮಿತಿ ಅಧ್ಯಯನ ನಡೆಸಿ ತೀರ್ಮಾನಕ್ಕೆ ಬರಲಿದೆ ಎಂದರು.
ಸಂಪುಟ ಉಪಸಮಿತಿಯ ತೀರ್ಮಾನವನ್ನು ಸಂಪುಟದ ಮುಂದೆ ಇಡುತ್ತೇವೆ. ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆ ಆಗಲ್ಲ. ಇನ್ನೂ ಸಂಪುಟ ಉಪಸಮಿತಿ ಸಭೆಯನ್ನೇ ಮಾಡಿಲ್ಲ. ಡಿಸಿಎಂ ಅವರೇ ಸಂಪುಟ ಉಪಸಮಿತಿ ಅಧ್ಯಕ್ಷರು, ನಾವು ಸದಸ್ಯರು. ಮೊದಲು ಸಂಪುಟ ಉಪ ಸಮಿತಿಯಲ್ಲಿ ಚರ್ಚೆ ಆಗಬೇಕು ಎಂದು ಪರಮೇಶ್ವರ್ ಹೇಳಿದರು.