HomeGadag Newsಶಾಸಕ ಡಾ. ಚಂದ್ರು ಜನರಿಗೆ ದ್ರೋಹವೆಸಗಿದ್ದಾರೆ: ರಾಮಣ್ಣ ಲಮಾಣಿ 

ಶಾಸಕ ಡಾ. ಚಂದ್ರು ಜನರಿಗೆ ದ್ರೋಹವೆಸಗಿದ್ದಾರೆ: ರಾಮಣ್ಣ ಲಮಾಣಿ 

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಾಸಕ ಡಾ. ಚಂದ್ರು ಲಮಾಣಿ ಭ್ರಷ್ಟಾಚಾರದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದು ಈ ಕ್ಷೇತ್ರದ ಜನರ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಮಾಡಿದ್ದಾರೆ. ಇವರಿಗೆ ಅಧಿಕಾರದಲ್ಲಿ ಮುಂದುವರೆಯುವ ಯಾವುದೇ ನೈತಿಕ ಹಕ್ಕಿಲ್ಲದ ಕಾರಣ ಕೂಡಲೇ ರಾಜೀನಾಮೆ ಕೊಟ್ಟು ಪ್ರಾಮಾಣಿಕವಾಗಿ ವೈದ್ಯರ ವೃತ್ತಿ ಮುಂದುವರೆಸಬೇಕು ಎಂದು ಮಾಜಿ ಶಾಸಕರಾದ ರಾಮಣ್ಣ ಲಮಾಣಿ ಮತ್ತು ರಾಮಕೃಷ್ಣ ದೊಡ್ಡಮನಿ ಆಗ್ರಹಿಸಿದರು.

ಅವರು ಸೋಮವಾರ ಪಟ್ಟಣದಲ್ಲಿ ಶಾಸಕರ ಮನೆ ಮೇಲೆ ಲೋಕಾಯುಕ್ತ ದಾಳಿಯಾದ ವೇಳೆ ಬಿಜೆಪಿ ಕಾರ್ಯಕರ್ತರು ಇದು ಕಾಂಗ್ರೆಸ್ ಪಕ್ಷ ಮತ್ತು ಹೆಚ್.ಕೆ. ಪಾಟೀಲರ ಷಡ್ಯಂತ್ರ ಎಂಬ ಸುಳ್ಳು ಆರೋಪ ಮಾಡಿರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಶಿರಹಟ್ಟಿ ಮತಕ್ಷೇತ್ರ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿದೆ. ದಿ. ಉಪನಾಳ ಗೂಳಪ್ಪನವರು, ಟಿ.ಬಿ. ಬಾಳಿಕಾಯಿ, ಎಸ್.ಎಸ್. ಪಾಟೀಲ, ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ ಮತ್ತು ನಾನು ಸೇರಿ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಕ್ಷೇತ್ರಕ್ಕೆ ಹೆಸರು ತರುವ ಕೆಲಸ ಮಾಡಿದ್ದೇವೆ. ಆದರೆ ವಿದ್ಯಾವಂತನೆಂದು ಜನರು ಕೊಟ್ಟ ಅವಕಾಶವನ್ನು ದುರುಪಯೋಗ ಮಾಡಿಕೊಂಡು ಲಂಚದ ಮೂಲಕ ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ವಿದ್ಯೆ ಇದ್ದರೂ ವಿನಯ, ಸಂಸ್ಕಾರವೇ ಇಲ್ಲದ ಅಧಿಕಾರದ ಮದದಿಂದ ಕ್ಷೇತ್ರದ ಅಭಿವೃದ್ಧಿಯ ಹಣ ಕೊಳ್ಳೆ ಹೊಡೆದುಕೊಂಡು ಹೋಗುವ ಇವರಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಜೀವಬೆದರಿಕೆ, ಜಾತಿನಿಂದನೆ ಕೇಸ್ ಮಾಡಿಸುವ ಸಂಸ್ಕೃತಿಯ ಶಾಸಕನಿಂದ ಜನ ರೋಸಿ ಹೋಗಿದ್ದಾರೆ. ಪಕ್ಷಕ್ಕೆ ನೈತಿಕ ಹಕ್ಕಿದ್ದರೆ ಬಿಜೆಪಿ ಪಕ್ಷದವರು ಮತ್ತು ಜನರ ಹಿತದೃಷ್ಟಿಯಿಂದ ರಾಜ್ಯಪಾಲರು ಇವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಕ್ಷೇತ್ರಕ್ಕೆ ಕೋಟ್ಯಾಂತರ ರೂ. ಹಣ ಹರಿದು ಬಂದಿದೆ. ಆದರೆ ಡಾ. ಚಂದ್ರು ಲಮಾಣಿ ಕಾಂಗ್ರೆಸ್ ಪಕ್ಷದಿಂದ ನಯಾಪೈಸೆ ದುಡ್ಡು ಬಂದಿಲ್ಲ ಎಂದು ಹೇಳುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡುತ್ತಾ ಭ್ರಷ್ಟಾಚಾರದಲ್ಲಿ ತೊಡಗಿದ್ದರು. ಮಾಡಲು ಸಾಕಷ್ಟು ಕೆಲಸವಿದ್ದರೂ ಅವರ ಚಿತ್ತ ಕೇವಲ ದುಡ್ಡು ಮಾಡುವತ್ತ ಇದೆ. ಆದಾಗ್ಯೂ ಕಾಂಗ್ರೆಸ್ ಪಕ್ಷದ ಪ್ರಶ್ನಾತೀತ ರಾಜರಾಣಿ ಹೆಚ್.ಕೆ. ಪಾಟೀಲರ ಹೆಸರನ್ನು ಎಳೆದು ತರುವ ಕೆಟ್ಟ ಮನಸ್ಥಿತಿ ಜನರಿಗೆ ಅರ್ಥವಾಗುತ್ತದೆ. ವಿದ್ಯಾವಂತರಾದ ಇವರು ಆತ್ಮಸಾಕ್ಷಿಯಿಂದ ರಾಜಕೀಯ ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕು ಎಂದರು.

ಬಳಿಕ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಶಾಸಕ ಡಾ. ಚಂದ್ರು ಲಮಾಣಿ ಅವರ ರಾಜೀನಾಮೆ ಪಡೆಯಬೇಕು ಎಂದು ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ವೇಳೆ ರಾಮಣ್ಣ ಲಮಾಣಿ (ಶಿಗ್ಲಿ), ಯಲ್ಲಪ್ಪ ಸೂರಣಗಿ, ನೀಲಪ್ಪ ಶರಸೂರಿ, ಶಿವಣ್ಣ ಕಬ್ಬೇರ, ಕಲ್ಲಪ್ಪ ಗಂಗಣ್ಣವರ, ಮನೋಜ ರಾಟೋಡ, ಜಗದೀಶ ಹುಲಿಗೆಮ್ಮನವರ, ಶಿವರಾಜಗೌಡ ಪಾಟೀಲ, ಪರಮೇಶ ಲಮಾಣಿ, ತಿಪ್ಪಣ್ಣ ಸಂಶಿ, ನಾಗರಾಜ ದೊಡ್ಡಮನಿ, ವಾಸೀಂ ಅಕ್ರಮ ಮುಚ್ಚಾಲೆ, ರಾಜು ಓಲೇಕಾರ, ರಾಜರತ್ನ ಹುಲಗೂರ, ನೀಲಪ್ಪ ಪಡಗೇರಿ, ಶಶಿಕಲಾ ಬಡಿಗೇರ, ರಫೀಕ ಕಲಬುರ್ಗಿ, ಸಂತೋಷ ತೇಲಿ, ರಂಜಾನಸಾಬ ನದಾಫ್ ಮುಂತಾದವರಿದ್ದರು.

ಕೆಪಿಸಿಸಿ ಸದಸ್ಯೆ ಸುಜಾತಾ ದೊಡ್ಡಮನಿ, ಚನ್ನಪ್ಪ ಜಗಲಿ, ಕಾಂಗ್ರೆಸ್ ಬ್ಲಾಕ್ ಕಮಿಟಿ ಅಧ್ಯಕ್ಷ ಜಿ.ಆರ್. ಕೊಪ್ಪದ, ಫಕ್ಕಿರೇಶ ಮ್ಯಾಟಣ್ಣವರ, ವಿರೇಂದ್ರ ಪಾಟೀಲ, ನಾಗರಾಜ ಮಡಿವಾಳರ, ಎಸ್.ಪಿ. ಬಳಿಗಾರ, ಶರಣು ಗೋಡಿ, ಸೋಮಣ್ಣ ಬೆಟಗೇರಿ ಮಾತನಾಡಿ, ಭ್ರಷ್ಟಾಚಾರದಿಂದ ಶಿಕ್ಷೆಗೊಳಗಾದ ಶಾಸಕನನ್ನು ಬಿಜೆಪಿ ಸಮರ್ಥಿಸಿಕೊಂಡರೆ, ಬೆಂಬಲಿಸಿದರೆ ಇದು ಬಿಜೆಪಿ ಸಂಸ್ಕೃತಿಯನ್ನು ಸಾಕ್ಷೀಕರಿಸಿದಂತಾಗುತ್ತದೆ. ಬಿಜೆಪಿಗರ ಹೋರಾಟಕ್ಕೆ ಯಾರೂ ಬೆಂಬಲ ನೀಡಬಾರದು. ಹಾಗೇನಾದರೂ ಆದರೆ ಇದಕ್ಕೆ ಕಾಂಗ್ರೆಸ್ ಪಕ್ಷವೂ ದಿಟ್ಟ ಹೋರಾಟಕ್ಕೆ ಸಿದ್ಧ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!