ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಡಾ. ಚಂದ್ರು ಲಮಾಣಿ ಅಭಿಮಾನಿ ಬಳಗದಿಂದ 2 ತಿಂಗಳುಗಳ ಕಾಲ ಲಕ್ಷ್ಮೇಶ್ವರ ಹಾಗೂ ಸುತ್ತಮುತ್ತಲಿನ ಗ್ರಾಮಗಳ 2026-26ನೇ ಸಾಲಿನ (ಕನ್ನಡ ಮಾಧ್ಯಮ) ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಸಂಪೂರ್ಣತಾ ಉಚಿತ ಶಿಬಿರವು ಯಶಸ್ವಿಯಾಗಿ ಜರುಗುತ್ತಿದ್ದು, ಮಾಜಿ ಸಚಿವರು, ತಹಸೀಲ್ದಾರರು, ಪಿಎಸ್ಐ ಸೇರಿದಂತೆ ಗಣ್ಯರು, ಅಧಿಕಾರಿ ವರ್ಗದವರೂ ಈ ಶಿಬಿರದಲ್ಲಿ ಕೆಲ ಗಂಟೆಗಳ ಕಾಲ ಶಿಕ್ಷಕರಾಗಿ ಕಾರ್ಯನಿರ್ವಹಿದ್ದಾರೆ. ಅದರಂತೆ ಸೋಮವಾರ ಶಾಸಕ ಡಾ. ಚಂದ್ರು ಲಮಾಣಿ ಶಿಬಿರಕ್ಕೆ ಭೇಟಿ ನೀಡಿ ಕೆಲ ಕಾಲ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಗಮನ ಸೆಳೆದರು.
ಮುಂಜಾನೆಯಿಂದಲೇ ಕೆಲಸದ ಒತ್ತಡ, ಕಾರ್ಯಕರ್ತರ ಭೇಟಿ, ಗ್ರಾಮೀಣ ಪ್ರದೇಶಗಳ ಭೇಟಿ ಇತ್ಯಾದಿ ಕಾರ್ಯಕ್ರಮಗಳ ನಡುವೆಯೂ ಶಾಸಕರು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ, ನುರಿತ ಶಿಕ್ಷಕರಂತೆಯೇ ಪಾಠ ಮಾಡಿದ್ದು ವಿಶೇಷವಾಗಿತ್ತು. ಮಾನವನ ಶ್ವಾಸಕಾಂಗವ್ಯೂಹ ಎಂಬ ಪಾಠದ ಕುರಿತು ಬೋಧನೆ ಮಾಡಿದ ಅವರು, ಮಾನವನ ಶ್ವಾಸಕಾಂಗವ್ಯೂಹದಲ್ಲಿ ಬರುವ ಅಂಶಗಳು, ರಕ್ತ ನಾಳಗಳು, ಶುದ್ಧ ರಕ್ತ, ಅಶುದ್ಧ ರಕ್ತ, ಉಸಿರಾಟ ಕ್ರಿಯೆಗಳು ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಪಾಠ ಮಾಡಿದರು.
ಈ ವೇಳೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಅಭ್ಯಾಸ ಹೇಗೆ ಮಾಡಬೇಕು, ಅವರು ಕೇಳುವ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬ ವಿಚಾರವಾಗಿ ಸವಿಸ್ತಾರವಾಗಿ ತಿಳಿಸಿಕೊಟ್ಟರು. ಈ ವೇಳೆ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಶಾಸಕರು, ಪಾಠದ ವಿಷಯಗಳನ್ನು ಹೇಗೆ ಮನದಟ್ಟು ಮಾಡಿಕೊಳ್ಳಬೇಕು, ಕಠಿಣ ಪರಿಶ್ರಮದಿಂದ ನಡೆಸಿದ ಸತತ ಅಭ್ಯಾಸದಿಂದ ದೊರಕುವ ಲಾಭಗಳ ಕುರಿತು ವಿವರಿಸಿದರು. ಶಿಕ್ಷಣ ಎನ್ನುವದು ಬಹುದೊಡ್ಡ ಶಕ್ತಿ. ವಿದ್ಯಾರ್ಥಿಗಳು ಗುರುಗಳು ಹೇಳಿದ ಅಂದಿನ ಪಾಠವನ್ನು ಅಂದೇ ಅಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಅಭಿಮಾನಿ ಬಳಗದ ಅಧ್ಯಕ್ಷ ನವೀನ ಬೆಳ್ಳಟ್ಟಿ, ಬಸವರಾಜ ಚಕ್ರಸಾಲಿ, ವಿಜಯ ಮೆಕ್ಕಿ, ಶಿಕ್ಷಕರಾದ ಕೆ.ಆರ್. ಲಮಾಣಿ, ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಸಮಯಪ್ರಜ್ಞೆ ಹೆಚ್ಚು ಅವಶ್ಯವಾಗಿದ್ದು, ಅದರ ಪ್ರಕಾರ ಜೀವನ ನಡೆಸಬೇಕು. ಇಂದಿನ ದಿನಗಳಲ್ಲಿ ಬಹಳ ಸುಲಭವಾಗಿ ಶಿಕ್ಷಣ ದೊರೆಯುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ಸಾಧನೆಯ ಕಡೆ ಹೆಜ್ಜೆ ಹಾಕಬೇಕು. ಕಳೆದ ಐದು ವರ್ಷಗಳಿಂದ ಡಾ. ಚಂದ್ರು ಲಮಾಣಿ ಅಭಿಮಾನಿಗಳ ಬಳಗ ಈ ಉಚಿತ ಶಿಕ್ಷಣ ನೀಡುತ್ತಿದ್ದು, ಬಳಗದ ಸೇವೆ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇದನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ವಿಸ್ತರಿಸುವ ಯೋಚನೆ ಹೊಂದಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ. ಚಂದ್ರು ಲಮಾಣಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.