ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿಯ ತಹಸೀಲ್ದಾರ ಕಚೇರಿಯಲ್ಲಿ ಸರಕಾರ ಹೊಸದಾಗಿ ಜಾರಿ ಮಾಡಿರುವ ಭೂ ಸುರಕ್ಷಾ ಯೋಜನೆಗೆ ಶಾಸಕ ಡಾ. ಚಂದ್ರು ಲಮಾಣಿ ಸೋಮವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ಶಿರಹಟ್ಟಿ-ಲಕ್ಮೇಶ್ವರ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಸುಮಾರು 150 ವರ್ಷಗಳ ಹಿಂದಿನ 27,53,334 ದಾಖಲೆಗಳನ್ನು ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ತಾವು ಇದ್ದ ಸ್ಥಳದಲ್ಲಿಯೇ ಭೂ ದಾಖಲೆಗಳನ್ನು ಪಡೆಯುವುದಕ್ಕಾಗಿ ಡಿಜಟಲೀಕರಣ ವ್ಯವಸ್ಥೆಯನ್ನು ಕಲ್ಪಿಸುವದಕ್ಕೆ ಇಂದು ಚಾಲನೆ ನೀಡಲಾಗಿದ್ದು, ಇದರಿಂದ ಹಳೆಯ, ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿ ದಾಖಲೆಗಳಾಗಿ ಪರಿವರ್ತನೆ, ರೆಕಾರ್ಡ್ ರೂಂಗಳಿಂದ ಪಡೆದುಕೊಳ್ಳಲು ಇರುವ ತೊಂದರೆಗಳ ನಿವಾರಣೆ, ಹಳೆಯ ದಾಖಲೆಗಳ ಸಂರಕ್ಷಣೆ ಹಾಗೂ ಕಳುವಾಗಲು, ತಿದ್ದಲು ಅಸಾಧ್ಯ, ನೇರವಾಗಿ ನೀವೇ ಡಿಜಿಟಲ್ ಮಾಧ್ಯಮದಿಂದ ಭೂ ದಾಖಲೆಗಳನ್ನು ಪಡೆದುಕೊಳ್ಳುವ ಸೌಲಭ್ಯ, ನಿಮ್ಮ ದಾಖಲೆಗಳನ್ನು ನಿಮ್ಮ ಕೈಗೆ ತಲುಪಿಸುವ ಯೋಜನೆ ಇದಾಗಿದೆ.
ವಿಳಂಬ, ಅಡೆ-ತಡೆಗಳನ್ನು ಆಲಿಸಿ, ತ್ವರಿತ ಆಡಳಿತ ಸೇವೆಯನ್ನು ಒದಗಿಸುವ ಪ್ರಯತ್ನ ಇದಾಗಿದೆ. ಮುಂಬರುವ ದಿನಗಳಲ್ಲಿ ಜನತೆಗೆ ಇದು ಸಹಕಾರಿಯಾಗಲಿದೆ ಎಂದರು.
ಶಿರಹಟ್ಟಿ ತಹಸೀಲ್ದಾರ ಅನಿಲ ಬಡಿಗೇರ, ಲಕ್ಮೇಶ್ವರ ತಹಶೀಲ್ದಾರ ವಾಸುದೇವ ಸ್ವಾಮಿ, ಪ.ಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಪ.ಪಂ ಸದಸ್ಯರಾದ ಸಂದೀಪ ಕಪ್ಪತ್ತನವರ, ಗೂಳಪ್ಪ ಕರಿಗಾರ, ಬಿ.ಡಿ. ಪಲ್ಲೇದ, ಅಶೋಕ ವರವಿ, ವೀರಣ್ಣ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.