ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಇಂದಿನ ದಿನಗಳಲ್ಲಿ ನುಡಿದಂತೆ ನಡೆಯುವವರು ಬಹಳ ವಿರಳ. ಆದರೆ ರೋಣ ಶಾಸಕ ಜಿ.ಎಸ್. ಪಾಟೀಲರು ನುಡಿದಂತೆ ನಡೆದು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಅವರ ಇಂತಹ ಗುಣಕ್ಕಾಗಿಯೇ ಶ್ರೀ ಅನ್ನದಾನೇಶ್ವರರ ಆಶೀರ್ವಾದ ಸದಾಕಾಲ ಅವರ ಕುಟುಂಬದ ಮೇಲಿದೆ ಎಂದು ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಮಹಾ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಶ್ರೀ ಅನ್ನದಾನೇಶ್ವರ ಪ.ಪೂ. ಮಹಾವಿದ್ಯಾಲಯದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ನಿರ್ಮಿಸಲಾಗುವ ಅಭಿನವ ಅನ್ನದಾನೇಶ್ವರ ಸಭಾ ಮಂಟಪದ ಭೂಮಿಪೂಜಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕೆಲವು ತಿಂಗಳ ಹಿಂದೆ ಕಾಲೇಜಿನ ಸಮಾರಂಭಕ್ಕೆ ಶಾಸಕ ಪಾಟೀಲರು ಬಂದಾಗ 50 ಲಕ್ಷ ರೂ ಅನುದಾನ ನೀಡುವುದಾಗಿ ಘೋಷಿಸಿದ್ದರು. ಕೆಲವೇ ದಿನಗಳಲ್ಲಿ ಅದನ್ನು ನೆರವೇರಿಸುವ ಮೂಲಕ ಇಂದು ತಮ್ಮ ಮಾತನ್ನು ಉಳಿಸಿಕೊಂಡು ಮಾದರಿಯಾಗಿದ್ದಾರೆ. ಇಂದು ಭೂಮಿ ಪೂಜೆಯಾದ ಈ ಕಟ್ಟಡ ಬೇಗನೆ ಪೂರ್ಣಗೊಂಡು ಉದ್ದೇಶಿತ ಕಾರ್ಯಕ್ಕೆ ಅನುಕೂಲವಾಗಲಿ ಎಂದು ಶ್ರೀಗಳು ಶುಭ ಹಾರೈಸಿದರು.
ಸಮಾರಂಭದಲ್ಲಿ ಎಸ್ಎವಿವಿಪಿ ಸಮಿತಿಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಕಾಲೇಜು ಆಡಳಿತ ಮಂಡಳಿಯ ಚೇರಮನ್ ಮಹಾಂತೇಶ ಸೋಮನಕಟ್ಟಿ, ಶಿವಯ್ಯ ಚಕ್ಕಡಿಮಠ, ಡಾ. ಕೆ.ಬಿ. ಧನ್ನೂರ, ಬ್ಲಾಕ್ ಕಾಂಗ್ರೆಸ್ ಶಹರ ಘಟಕದ ಅಧ್ಯಕ್ಷ ಶಿವನಗೌಡ ಪಾಟೀಲ, ಬಸವರಾಜ ಕಳಕಣ್ಣವರ, ವೀರಣ್ಣ ಹಳ್ಳಿ, ವಿ.ಎಸ್. ದೋತ್ರದ, ಎಂ.ಪಿ. ಪಾಟೀಲ, ಶ್ರೀ ಅಭಿನವ ಅನ್ನದಾನೇಶ್ವರ ಕಾಲೇಜಿನ ಪ್ರಾಚಾರ್ಯೆ ಅನಸೂಯಾ ಪಾಟೀಲ, ಎಸ್.ಎ. ಪಿಯು ಕಾಲೇಜು ಪ್ರಾಚಾರ್ಯ ವಾಯ್.ಸಿ. ಪಾಟೀಲ, ಯೂಸೂಫ್ ಇಟಗಿ, ಬ್ಲಾಕ್ ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ಶೇಕಪ್ಪ ಜುಟ್ಲದ, ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕಳಕನಗೌಡ ಪೊಲೀಸ್ ಪಾಟೀಲ, ಗುಡದಪ್ಪ ಗೋಡಿ, ಸಂತೋಷ ಹನಮಸಾಗರ, ಅಲ್ಲಾಭಕ್ಷ ನದಾಫ್, ಮೈಲಾರಪ್ಪ ಚಳ್ಳಮರದ ಮುಂತಾದವರು ಉಪಸ್ಥಿತರಿದ್ದರು.
ಕಾಲೇಜು ಉಪನ್ಯಾಸಕ ಎಫ್.ಎನ್. ಹುಡೇದ ಸ್ವಾಗತಿಸಿ ನಿರೂಪಿಸಿದರು.
ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಜಿ.ಎಸ್. ಪಾಟೀಲ, ನುಡಿದಂತೆ ನಡೆಯುವ ಆಶೀರ್ವಾದವನ್ನು ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳು ಮಾಡಿದ್ದರಿಂದಲೇ ಈ ಕಾರ್ಯವಾಗಿದೆ ಎಂಬ ನಂಬುಗೆ ನನ್ನದು. ಶ್ರೀಮಠಕ್ಕೆ ಗುರು ಕಾಣಿಕೆ ಸಲ್ಲಿಸಿದ ತೃಪ್ತಿ ಇಂದು ನನಗಾಗಿದೆ. ಈ ಕಾರ್ಯವನ್ನು ಸಾಧ್ಯವಾದಷ್ಟು ಬೇಗನೆ ಮುಗಿಸಿ ಶ್ರೀಮಠದ ಸೇವೆಗೆ ಅಣಿಮಾಡಿ ಕೊಡಲಾಗುವುದು ಎಂದು ಹೇಳಿದರು.