ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕುಡಿಯುವ ನೀರು ಸರಬರಾಜಿನ ಬಗ್ಗೆ ನಿರ್ಲಕ್ಷ್ಯ ತೋರದೇ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಸ್ಥಳೀಯ ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತಾಕೀತು ಮಾಡಿದರು.
ಅವರು ಬುಧವಾರ ಪಟ್ಟಣದಲ್ಲಿನ ನೀರು ಸರಬರಾಜು ಜಲಾಗಾರಗಳನ್ನು ವೀಕ್ಷಿಸಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು. ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ನೀರು ಸರಬರಾಜಾಗುವ ಪೈಪ್ಲೈನ್ ಮತ್ತು ಯಂತ್ರೋಪಕರಣಗಳು ಪದೇ ಪದೇ ದುರಸ್ಥಿಗೆ ಬರುತ್ತಿದ್ದು, ಹೊಸ ಪೈಪ್ಲೈನ್ ಯೋಜನೆ ಅನುದಾನಕ್ಕಾಗಿ 3 ಹಂತದ ಕ್ರಿಯಾಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ.
ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಸಂಬಂಧಪಟ್ಟ ಸಚಿವರು, ಅಧಿಕಾರಿಗಳನ್ನು ಸಂಪರ್ಕಿಸಿ ದೊಡ್ಡ ಮೊತ್ತದ ಅನುದಾನ ತರುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.
ಈಗಾಗಲೇ ಅಮೃತ 2.0 ಯೋಜನೆಯಲ್ಲಿ ಲಭ್ಯವಿರುವ 33 ಕೋಟಿ ರೂ ಅನುದಾನಲ್ಲಿ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಆದಾಗ್ಯೂ ಕಾಮಗಾರಿ ಸಾಕಾರಗೊಳ್ಳುವುದು ವಿಳಂಬವಾಗಬಹುದು.
ಆದ್ದರಿಂದ ಸ್ಥಳೀಯವಾಗಿ ಲಭ್ಯವಿರುವ ಬೋರ್ವೆಲ್ಗಳ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಿಕೊಳ್ಳಿ. ಪಟ್ಟಣದಲ್ಲಿರುವ 100ಕ್ಕೂ ಹೆಚ್ಚು ಬೋರ್ವೆಲ್, ಯಂತ್ರೋಪಕರಣಗಳನ್ನು ದುರಸ್ಥಿ ಮಾಡಿಸಿ ಜಲಾಗಾರಗಳಿಗೆ ಸಂಪರ್ಕ ಕಲ್ಪಿಸಿ ಆ ಮೂಲಕ ನೀರು ಸರಬರಾಜು ಮಾಡಬೇಕು. ಈ ಕಾರ್ಯದಲ್ಲಿ ಆಯಾ ವಾರ್ಡ್ಗಳ ಸದಸ್ಯರೊಂದಿಗೆ ಚರ್ಚಿಸಿ ಅವರ ಸಲಹೆ-ಸೂಚನೆ ಪಾಲಿಸಿ. ನೀರು ಸರಬರಾಜಿಗಾಗಿ ಪುರಸಭೆಯಿಂದ ಸಾಕಷ್ಟು ಹಣ ಖರ್ಚಾಗುತ್ತಿದ್ದರೂ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ವೇಳೆ ಪುರಸಭೆ ಸದಸ್ಯರಾದ ಪ್ರವೀಣ ಬಾಳಿಕಾಯಿ, ಮಹಾದೇವಪ್ಪ ಅಣ್ಣಿಗೇರಿ, ಪುಲಿಕೇಶ ಉಪನಾಳ, ನೀಲಪ್ಪ ಹತ್ತಿ, ಸತೀಶ ಕಾಡಣ್ಣವರ, ಮುಖ್ಯಾಧಿಕಾರಿ ಮಹೇಶ ಹಡಪದ, ಮಂಜುನಾಥ ಮುದಗಲ್, ಹನಮಂತಪ್ಪ ನಂದೆಣ್ಣವರ ಸೇರಿದಂತೆ ಸಾರ್ವಜನಿಕರು, ವಾಟರ್ಮೆನ್ಗಳು ಇದ್ದರು.