ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮತಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳ ರಸ್ತೆಗಳನ್ನು ಸುಧಾರಣೆ ಮಾಡುವುದರ ಜೊತೆಗೆ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಸಾರ್ವಜನಿಕರಿಗೆ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಸೋಮವಾರ ಶಿರಹಟ್ಟಿ ತಾಲೂಕಿನ ತೊಳಲಿ ಗ್ರಾಮದಲ್ಲಿ ಕೇಂದ್ರ ರಸ್ತೆ ನಿಧಿ ಯೋಜನೆ ಅಡಿಯ (ಸಿಆರ್ಐಎಫ್) 6 ಕೋಟಿ ರೂ ವೆಚ್ಚದಲ್ಲಿ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ 136 ಕಿ.ಮೀ 134.97ದಿಂದ 136.97ವರೆಗೆ ಹಾಗೂ 181.250ದಿಂದ 206.25ವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ಸುಧಾರಣೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರಕೃತಿ ವಿಕೋಪದಿಂದ ಮತಕ್ಷೇತ್ರದಲ್ಲಿ ಹಲವಾರು ರಸ್ತೆಗಳು ಹಾಳಾಗಿದ್ದು, ಇವುಗಳ ಸುಧಾರಣೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಸಂಪೂರ್ಣ ವರದಿಯನ್ನು ಸಲ್ಲಿಸಲಾಗಿತ್ತು. ಹಂತ ಹಂತವಾಗಿ ಅನುದಾನ ಬಿಡುಗಡೆಯಾಗುತ್ತಿದ್ದು, ಆದ್ಯತೆಯ ಮೇರೆಗೆ ಕೆಲಸಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಹಲವಾರು ಕಡೆಗಳಲ್ಲಿ ಸುಧಾರಣೆ ಕೆಲಸಗಳು ಪ್ರಗತಿಯಲ್ಲಿವೆ. ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರಿಗೂ ಸಹ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಕಾಮಗಾರಿಯನ್ನು ನಿರ್ವಹಿಸುವ ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿಯನ್ನು ಮಾಡಿ ಮುಗಿಸಬೇಕು. ಈ ಹಂತದಲ್ಲಿ ಸಾರ್ವಜನಿಕರು ಇಂತಹ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಬೇಕು ಎಂದರು.
ಗ್ರಾ.ಪಂ ಅಧ್ಯಕ್ಷ ಫಕ್ಕೀರಪ್ಪ ನರಸಮ್ಮನವರ, ಶಿವನಗೌಡ ಕಂಠೀಗೌಡ್ರ, ಸದಸ್ಯರಾದ ಹೇಮಕ್ಕ ಹಿರೇಮಠ, ನಿಂಗಪ್ಪ ನಾಯ್ಕ, ಮಹೇಶ ತೆಗ್ಗಿನಮನಿ, ಚನ್ನವೀರಗೌಡ ತೆಗ್ಗಿನಮನಿ, ವೀರೇಶ ತಂಗೋಡ, ಸಂತೋಷ ಹಿರೇಮಠ, ಗುತ್ತಿಗೆದಾರ ಬಿರಾದಾರ, ವಿಶ್ವನಾಥ ಪಾಟೀಲ, ಪ್ರಶಾಂತ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.
ಶಿರಹಟ್ಟಿ-ಲಕ್ಮೇಶ್ವರ-ಮುಂಡರಗಿ ತಾಲೂಕುಗಳು ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಹಾಳಾಗಿರುವ ಎಲ್ಲ ರಸ್ತೆಗಳ ಸುಧಾರಣೆಗೆ 150 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಂಬಂಧಿಸಿದ ಇಲಾಖೆಗಳಿಗೆ ಸಲ್ಲಿಸಲಾಗಿದೆ. ಈಗಾಗಲೇ ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿ ರಸ್ತೆಯು ಪೂರ್ಣಗೊಳ್ಳುವ ಹಂತದಲ್ಲಿದೆ. ಮತಕ್ಷೇತ್ರದಿಂದ ಜಿಲ್ಲಾ ಕೇಂದ್ರಕ್ಕೆ ತೆರಳಲು ಮುಕ್ತ ಸಂಚಾರವಾಗಲಿದೆ. ಬಾಕಿ ಇರುವ ರಸ್ತೆಗಳನ್ನು ಅನುದಾನ ಬಿಡುಗಡೆಯ ನಂತರ ಕೈಗೊಳ್ಳಲಾಗುವುದು ಎಂದು ಡಾ. ಚಂದ್ರು ಲಮಾಣಿ ತಿಳಿಸಿದರು.