ವಿಜಯಪುರ: ಹಾಡಹಗಲೇ ಮುದ್ದೇಬಿಹಾಳ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯೊಂದರ ಬೀಗ ಮುರಿದ ಕಳ್ಳನೋರ್ವ ನಾಲ್ಕು ಮೊಬೈಲ್ ಹಾಗೂ ಅಂಗಡಿಯಲ್ಲಿದ್ದ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಹೋಳಿ ಆಚರಣೆಯ ಸಂದರ್ಭದಲ್ಲಿ ಕಳ್ಳ ಈ ಕೃತ್ಯ ಎಸಗಿದ್ದಾನೆ.
ಪಟ್ಟಣದ ಆರ್ಯವರ್ಧನ ಮೊಬೈಲ್ ಶಾಪ್ನಲ್ಲಿ ಇಂದು ಮದ್ಯಾಹ್ನ ಕಳ್ಳತನ ನಡೆದಿದೆ. ಕಳ್ಳನ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಂಗಡಿ ಮಾಲೀಕ ರಾಜು ನಾಡಗೌಡ, ಹೋಳಿಹಬ್ಬದ ಸಲುವಾಗಿ ಮನೆಯವರೊಂದಿಗೆ ಕೂಡಲಸಂಗಮಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ. ನಾಲ್ಕು ಮೊಬೈಲ್ ಹಾಗೂ ನಗದು ಸೇರಿದಂತೆ 75 ಸಾವಿರ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿವೆ. ಹಾಡಹಗಲೇ ಅಂಗಡಿ ಕಳುವು ಆಗಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರುಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



