ವಿಜಯಸಾಕ್ಷಿ ಸುದ್ದಿ, ಗದಗ: ವೈಮಾನಿಕ ದಾಳಿ ಎದುರಾದಾಗ ಸ್ಥಳೀಯ ಜನರು ಭಯಭೀತರಾಗದೇ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಣಕು ಪ್ರದರ್ಶನ ಕೈಗೊಳಲಾಯಿತು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ನಗರದ ವಿಡಿಎಸ್ ಟಿ ಮೈದಾನದಲ್ಲಿ ಗುರುವಾರ ನಡೆದ ಅಣುಕು ಪ್ರದರ್ಶನದ ನಂತರ ಮಾತಾನಾಡಿದ ಅವರು, ಯುದ್ಧದಂತಹ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸರ್ಕಾರ ಹೇಗೆ ಕೆಲಸ ನಿರ್ವಹಿಸುತ್ತದೆ ಎಂದು ಅವರು ತಿಳಿಸಿದರು.
ನಗರದಲ್ಲಿ ವೈಮಾನಿಕ ದಾಳಿಯಾದಾಗ ಅದಕ್ಕೆ ಇಲಾಖೆಯ ಅಧಕಾರಿಗಳು ಹೇಗೆ ಕಾರ್ಯಾಚರಣೆ ನಡೆಸಿ, ಪರಿಹಾರ ಕಂಡುಕೊಳ್ಳುತ್ತೇವೆ ಎನ್ನುವುದನ್ನು ತಿಳಿಸುವ ಅಣಕು ಪ್ರದರ್ಶನ ಇದಾಗಿದ್ದು, ಬಾಂಬ್ ಬಿದ್ದಿದೆ ಎಂದು ಮಾಹಿತಿ ತಿಳಿದ ಕೂಡಲೇ ಬಾಂಬ್ ಸ್ಕ್ವಾಡ್ ತಕ್ಷಣ ಹೋಗಿ ಅಲ್ಲಿನ ಪರಿಸ್ಥಿತಿ ಅರಿತು ಇನ್ನೂ ಸ್ಫೋಟಗೊಳ್ಳದ ಬಾಂಬ್ಗಳನ್ನು ನಿಷ್ಕ್ರಿಯಗೊಳಿಸಿದರು, ಪೊಲೀಸ್, ಅಗ್ನಿಶಾಮಕ ದಳ, ಆಂಬ್ಯುಲೆನ್ಸ್ ಸ್ವಯಂಸೇವಕರು ಬಂದು ಭಯಭೀತರಾದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದುರು, ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಗೊಳಿಸಲಾಯಿತು, ಪ್ರಥಮ ಚಿಕಿತ್ಸೆಯ ಕ್ಯಾಂಪ್ಗಳನ್ನು ಪ್ರಾರಂಭಿಸಲಾಯಿತಲ್ಲದೆ, ಪರಿಸ್ಥಿತಿಗನುಗುಣವಾಗಿ ಕಾರ್ಯಗಳನ್ನು ನಿಭಾಯಿಸುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲಾಯಿತು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, ಅಣಕು ಪ್ರದರ್ಶನದ ಮೂಲಕ ಯಾವುದಾದರೂ ತುರ್ತು ಸ್ಥಿತಿ ಎದುರಾದಾಗ ಅದನ್ನು ಎದುರಿಸಲು ಹೇಗೆ ಸಿದ್ಧರಾಗಿರಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಅಣಕು ಪ್ರದರ್ಶನದಲ್ಲಿ 22 ಇಲಾಖೆಗಳು ಸೇರಿದಂತೆ ಎನ್ಸಿಸಿ, ಎನ್ಎಸ್ಎಸ್, ಮಾಜಿ ಸೈನಿಕರು, ಸ್ಕೌಟ್ಸ್-ಗೈಡ್ ಒಳಗೊಂಡು 300 ಜನ ಭಾಗವಹಿಸಿ, ಅಲರ್ಟ ಮೇಸೆಜ್ ಬಂದ ತಕ್ಷಣ ಯಾವ ತಂಡ ಯಾವ ಕೆಲಸವನ್ನು ಮಾಡಬೇಕು ಎನ್ನುವ ಜವಾಬ್ದಾರಿಗಳನ್ನು ಈ ಮೂಲಕ ತಿಳಿಸಲಾಯಿತು. ಅಣುಕು ಪ್ರದರ್ಶನದಲ್ಲಿ 18 ತಂಡಗಳು ಭಾಗವಹಿಸಿದ್ದವು ಎಂದು ತಿಳಿಸಿದರು.
ರಾಜ್ಯ ವಿಪತ್ತು ಪರಿಹಾರ ತಂಡ, ಎಸ್ಕಾಂ ಎನ್ಸಿಸಿ, ಎನ್ಎಸ್ಎಸ್, ಸ್ಕೌಟ್ಸ್ ಗೈಡ್ಸ್ ತಂಡದವರು ಪರಿಸ್ಥಿತಿ ನಿರ್ವಹಣೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಹಿರಿಯ ಪೊಲೀಸ್ ಅಧಿಕಾರಿಗಳು, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಸಾರ್ವಜನಿಕರು ಹಾಜರಿದ್ದರು.
ನಿಜವಲ್ಲ, ಅಣಕು ಪ್ರದರ್ಶನವಷ್ಟೇ
ವೈಮಾನಿಕ ದಾಳಿಯಿಂದ ನಗರದ ಮನೆಗಳಿಗೆ ಬೆಂಕಿ ಹೊತ್ತಿ ಉರಿಯಿತು. ಮನೆಯಲ್ಲಿದ್ದ ಜನರು ಬೆಂಕಿಯಿಂದ ಗಾಯಗೊಂಡರು, ದಾಳಿಯಿಂದ ಸುತ್ತಮುತ್ತಲಿನ ಜನರು, ಮಕ್ಕಳು ಭಯಭೀತರಾದರು, ಕೆಲವರಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲಿಯೇ ಮೂರ್ಛೆ ಹೋದರು. ವೈಮಾನಿಕ ದಾಳಿಯ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳ ದೌಡಾಯಿಸಿ ಅಗ್ನಿ ನಂದಿಸುವ ಕೆಲಸ ಪ್ರಾರಂಭಿಸಿದರು. ಅಗ್ನಿ ಸಂಭವಿಸಿದ ಮನೆಯೊಳಗಿದ್ದ ಜನರನ್ನು ಮನೆಯೊಳಗೆ ಹೋಗಿ ಹೊರತಂದು ಸಂರಕ್ಷಿಸಿದರು, ತುರ್ತು ಪರಿಸ್ಥಿತಿ ಸಹಾಯವಾಣಿಯನ್ನು ಪ್ರಾರಂಭಿಸಿದರು. ಆಂಬ್ಯುಲೆನ್ಸ್ ಗಳು ಬಂದ ತಕ್ಷಣ ಸ್ಥಳದಲ್ಲಿದ ಪೊಲೀಸ್ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಗೊಳಿಸುವ ಕಾರ್ಯ ಪ್ರಾರಂಭಿಸಿದರು.