ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಸಮಾಜದಲ್ಲಿ ನಾವು ಮಾಡುವ ಉತ್ತಮ ಕಾರ್ಯಗಳಿಂದ ನಮ್ಮ ಹೆಸರು ಅಜರಾಮರವಾಗಿ ಉಳಿಯಸಲು ಸಾಧ್ಯವಾಗುತ್ತದೆ. ಮರಣದ ನಂತರವೂ ಚಂದ್ರಮೌಳೀಶ್ವರ ಶಿವಾಚಾರ್ಯರ ಕಾರ್ಯಗಳು ಜೀವಂತಿಕೆಯನ್ನು ಪಡೆದುಕೊಂಡಿವೆ ಎಂದು ಮಾನಿಹಳ್ಳಿ ಪುರವರ್ಗ ಮಠದ ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.
ಹರಪನಹಳ್ಳಿ ಪಟ್ಟಣದ ತೆಗ್ಗಿನ ಸಂಸ್ಥಾನದ ಟಿ.ಎಂ. ಚಂದ್ರಶೇಖರಯ್ಯ ಸಭಾಂಗಣದಲ್ಲಿ ಬುಧವಾರ ಚಂದ್ರಮೌಳೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳ 89ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತೆಗ್ಗಿನ ಮಠದಂತಹ ಮಠಗಳು ನಾಡಿನಲ್ಲಿ ಬೆರಳಣಿಕೆಯಷ್ಟಿದ್ದು, ಸಮಾಜದಲ್ಲಿ ಶಿಕ್ಷಣ ಕ್ರಾಂತಿ ಹಾಗೂ ಸಮಾಜ ಸೇವೆ ಮಾಡುವುದರಲ್ಲಿ ತೆಗ್ಗಿನ ಮಠ ಸಂಸ್ಥನವು ನಾಡಿನಲ್ಲಿ ಮೊದಲ ಸಾಲಿನಲ್ಲಿದೆ. ಈ ಸಂಸ್ಥೆಯ ಏಳ್ಗೆಯಾಗಲು ಟಿ.ಎಂ. ಚಂದ್ರಶೇಖರಯ್ಯನವರ ಪಾತ್ರ ಅಮೂಲ್ಯವಾದದ್ದು. ಅವರು ಅಕ್ಬರ್ನ ಆಸ್ಥಾನದಲ್ಲಿ ಇದ್ದ ಚಾಣಾಕ್ಷ ಮಂತ್ರಿ ಬೀರಬಲ್ಲನಂತಹ ಚತುರತೆಯುಳ್ಳವರಾಗಿದ್ದಾರೆ ಎಂದರು.
ತೆಗ್ಗಿನ ಮಠ ಸಂಸ್ಥಾನದ ಪೀಠಾಧಿಪತಿ ವರಸಧ್ಯೋಜಾತ ಸ್ವಾಮೀಜಿ ಮಾತನಾಡಿ, ನಾಡಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವೀರಶೈವ ಮಠ-ಮಾನ್ಯಗಳು ಸಾಕಷ್ಟು ಉತ್ತಮ ಕಾರ್ಯ ಮಾಡಿಕೊಂಡು ಬರುತ್ತಿವೆ. ಚಂದ್ರಮೌಳೀಶ್ವರರು ಮಧ್ಯ ಕರ್ನಾಕದಲ್ಲಿ ಸಾಕಷ್ಟು ವಿದ್ಯಾಕೇಂದ್ರಗಳನ್ನು ತೆರೆದು ಮನೆ ಮನೆಗಳಲ್ಲಿ ಬೆಳಗುವ ದೀಪವಾಗಿದ್ದಾರೆ ಎಂದರು.
ತೆಗ್ಗಿನ ಮಠ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ ಮಾತನಾಡಿ, ಗುರುಗಳು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವು ಸಾಗಬೇಕಿದೆ. ಬಡ ಹಿಂದುಳಿದ ತಾಲೂಕೆಂಬ ಕಪ್ಪು ಚುಕ್ಕಿಯನ್ನು ಅಳಿಸಿದ ಕೀರ್ತಿ ಚಂದ್ರಮೌಳೀಶ್ವರರಿಗೆ ಸಲ್ಲುತ್ತದೆ. ಅವರು ನಡೆದಾಡಿದ ಸ್ಥಳಗಳು ಇಂದು ಪುಣ್ಯ ಕ್ಷೇತ್ರಗಳಾಗಿ ಪರಿವರ್ತನೆಗೊಂಡಿವೆ ಎಂದರು.
ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಎಂ.ರಾಜಣ್ಣ, ನಿವೃತ್ತ ಇಓ ಹೆಚ್.ಎಂ. ಕೊಟ್ರಯ್ಯ ಮಠ ಬೆಳೆದು ಬಂದ ಹಾದಿಯನ್ನು ಸ್ಮರಿಸಿದರು.
ಈ ವೇಳೆ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ ಹಿರೇಮಠ ಕೂಡ್ಲಿಗಿ, ಟಿ.ಎಂ. ಚನ್ನವೀರಸ್ವಾಮಿ, ಟಿ.ಎಂ. ಪ್ರತೀಕ್, ಟಿ.ಎಂ. ಗುರುಬಸವರಾಜ್, ಟಿ.ಎಂ. ರಾಜಶೇಖರ್, ಟಿ.ಎಂ. ನಾಗರಾಜ್, ಟಿ.ಎಂ. ವೀರೇಶ್, ಎ. ವೀರಣ್ಣ, ಕರಿಬಸಪ್ಪ, ಪ್ರಾಚಾರ್ಯ ಸಿ.ಎಂ. ವೀರೇಶ್, ನಾಗೇಂದ್ರ, ಚರಣ್, ಅರುಣ್ ಕುಮಾರ್ ಹಾಗೂ ಸಿಬ್ಬಂದಿ ವರ್ಗದವರಿದ್ದರು.