ವಿಜಯಸಾಕ್ಷಿ ಸುದ್ದಿ, ಗದಗ: ಲಕ್ಕುಂಡಿಯಲ್ಲಿ ಜರುಗುತ್ತಿರುವ ಪ್ರಾಚ್ಯಾವಶೇಷಗಳ ಅನ್ವೇಷಣೆಯಲ್ಲಿ 5 ಬಾವಿ ಹಾಗೂ 5 ಶಾಸನಗಳು ಸೇರಿದಂತೆ 600ಕ್ಕೂ ಅಧಿಕ ಪ್ರಾಚ್ಯಾವೇಶಗಳು ಲಭ್ಯವಾಗಿವೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಲಕ್ಕುಂಡಿ ಗ್ರಾಮದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಲಕ್ಕುಂಡಿಯನ್ನು ರಾಷ್ಟ್ರಕೂಟರ ಕಾಲದಲ್ಲಿ ಕಟ್ಟಿದ್ದಾರೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ವಿಶೇಷ ಅಭಿವೃದ್ಧಿ ಹೊಂದಿ ಹೊಯ್ಸಳರು, ಕೆಲವು ಕಾಲ ವಿಜಯನಗರದ ಅರಸರೂ ಆಳಿದ್ದಾರೆ. ಇಂದು ಪ್ರಾಚ್ಯಾವಶೇಷಗಳ ಅನ್ವೇಷಣೆ ಸಂಗ್ರಹಣೆ ಕೆಲಸ ವಿಶೇಷ ಪ್ರಯತ್ನವಾಗಿದ್ದು ಸಾಂಸ್ಕೃತಿಕ, ಐತಿಹಾಸಿಕ, ಕಾಂತ್ರಿಕಾರಕ ಹೆಜ್ಜೆಯಾಗಿದೆ ಎಂದರು.
ಲಕ್ಕುಂಡಿಯಲ್ಲಿ ಈ ಹಿಂದೆ ಇದ್ದ 101 ದೇವಾಲಯಗಳಲ್ಲಿ ಇಂದು 50-60ಲಭ್ಯವಾಗಿದೆ ಹಾಗೂ 8-10 ದೇವಾಲಯದ ಪಾಯಗಳು ದೊರಕಿವೆ. ಇನ್ನುಳಿದ ದೇವಾಲಯಗಳು ಎಲ್ಲೆಲ್ಲಿ ಇದ್ದವು ಎಂದು ಗುರುತಿಸುವದು ಬಹುದೊಡ್ಡ ಕೆಲಸವಾಗಿದೆ. ಹುದುಗಿಹೋದ ದೇವಾಲಯಗಳಲ್ಲಿ ಮರುಸೃಷ್ಟಿಸಬಹುದಾದ ದೇವಾಲಯ ಬಗ್ಗೆ ತಜ್ಞರು ಗಂಭೀರ ಆಲೋಚನೆ ಮಾಡುತ್ತಿದ್ದಾರೆ ಎಂದರು.
ಅನ್ವೇಷಣೆ ಸಂದರ್ಭದಲ್ಲಿ 5 ಹಳೆ ಬಾವಿಗಳು ಹೊಸದಾಗಿ ಸಿಕ್ಕಿದೆ ಹಾಗೂ 5 ಶಾಸನಗಳು ಲಭ್ಯವಾಗಿವೆ. ಅದರಲ್ಲಿ 3 ಶಾಸನಗಳು ಸಂಪೂರ್ಣ ಅಪ್ರಕಟಿತವಾಗಿದೆ. 2 ಅಪ್ರಕಟಿತವಾಗಿದೆ. ಈ ಕಾರ್ಯ ಎಲ್ಲರಲ್ಲೂ ಹುಮ್ಮಸ್ಸು ಹೆಚ್ಚಿಸಿದೆ. ಸರ್ಕಾರದ ಈ ಕೆಲಸದಿಂದ ಇತಿಹಾಸವಿರುವ ಗ್ರಾಮಗಳಲ್ಲಿ ಯಾವ ರೀತಿ ಕಾರ್ಯ ಕೈಗೊಳ್ಳಬಹುದು ಎನ್ನುವುದರ ಬಗ್ಗೆ ದಿಕ್ಸೂಚಿ ಸಿಕ್ಕಂತಾಗಿದೆ ಎಂದು ಹೇಳಿದರು.
ಇಂದು 13 ಗುಡಿಗಳನ್ನು ರಕ್ಷಿತ ಸ್ಮಾರಕ ಎಂದು ಪೋಷಿಸಲು ಸರ್ಕಾರ ನಿರ್ಣಯ ಕೈಗೊಂಡಿದೆ ಹಾಗೂ 1 ಮಠದಲ್ಲಿ ವಾಸ ಮಾಡುತ್ತಿರುವ ಮಾಲಿಕರು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಬಿಟ್ಟುಕೊಟ್ಟಿದ್ದಾರೆ. ಸ್ವ ಇಚ್ಛೆಯಿಂದ ಬಿಟ್ಟುಕೊಟ್ಟ ಅವರಿಗೆ ಸರ್ಕಾರದಿಂದ ವಿಶೇಷ ಗೌರವ ನೀಡಲಾಗಿದೆ ಎಂದರು.
13 ಸ್ಮಾರಕಗಳ ಸಂರಕ್ಷಣಾ ಕಾರ್ಯ ಪ್ರಾರಂಭವಾಗಿದೆ. ಮೊದಲು ಭೂಮಿಯ ಮೇಲ್ಭಾಗದಲ್ಲಿ ಲಭ್ಯವಿರುವ ಸ್ಮಾರಕಗಳನ್ನು ಸಂಗ್ರಹಿಸುಲಾಗುತ್ತದೆ. ಆನಂತರ ಡಿಸೆಂಬರ್ ಅಂತ್ಯದ ಒಳಗೆ ಉತ್ಖನನ ಕೆಲಸ ಪ್ರಾರಂಭಿಸಲಾಗುತ್ತದೆ ಹಾಗೂ ಕೋಟೆಯನ್ನು ಅಭಿವೃದ್ಧಿಪಡಿಸಿ ಲಕ್ಕುಂಡಿಯನ್ನು ಪ್ರವಾಸೋದ್ಯಮ ತಾಣವನ್ನಾಗಿಸಿ, ಇತಿಹಾಸವನ್ನು ತಿಳಿಯಲು ಬರುವವರಿಗೆ ಶ್ರೇಷ್ಠ ಕೇಂದ್ರವನ್ನಾಗಿಸಿ, ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯದಿಂದ ಲಕ್ಕುಂಡಿಯನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಪ್ರಯತ್ನ ಸಾಗಲಿದೆ ಎಂದು ತಿಳಿಸಿದರು.
ಶಾಸಕರಾದ ಸಿ.ಸಿ. ಪಾಟೀಲ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿಯ ಸದಸ್ಯ ಸಿದ್ಧಲಿಂಗೇಶ್ವರ ಎಚ್.ಪಾಟೀಲ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.