ವಿಜಯಸಾಕ್ಷಿ ಸುದ್ದಿ, ಗದಗ: ಜಗತ್ತಿನಲ್ಲಿ ತಾಯಿಗಿಂತ ಮಿಗಿಲಾದವರು ಯಾರೂ ಇಲ್ಲ. ತಾಯಿ ದೇವರಿಗಿಂತಲೂ ಶ್ರೇಷ್ಠ. ತಾಯಿಯೇ ದೇವರು ಎಂದು ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
ಇಲ್ಲಿನ ಲಿಂಗಾಯತ ಪ್ರಗತಿಶೀಲ ಸಂಘದ 2745ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ತಾಯಿಗೆ ಮಾತೃ ದೇವೋ ಭವ ಎನ್ನುತ್ತೇವೆ. ಹೀಗಾಗಿ ತಾಯಿಯನ್ನು ಪ್ರೀತಿ, ಗೌರವ, ಸಂತೋಷದಿಂದ ನೋಡಿಕೊಳ್ಳಬೇಕು. ತಾಯಿಯೆಂದರೆ ಭೂಮಿಯ ರೂಪ. ಆಕೆ ಭೂಮಿಯಷ್ಟೇ ಸಹನೆ, ತಾಳ್ಮೆ, ಕರುಣೆಯುಳ್ಳವಳು. ತಾಯಿಯ ಪ್ರೀತಿಯನ್ನು ಅಳೆಯಲು ಸಾಧ್ಯವಿಲ್ಲ. ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಶ್ರೀಗಳು ತಿಳಿಸಿದರು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ವಚನ ಸಂಗೀತ ನಡೆಸಿದರು. ಧಾರ್ಮಿಕ ಗ್ರಂಥ ಪಠಣವನ್ನು ಮನೋಜ ವಾಯ್.ಸುಳ್ಳದ, ವಚನ ಚಿಂತನವನ್ನು ನಂದೀಶ್ ಬಿ.ಸುಳ್ಳದ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ತೋಂಟದಾರ್ಯ ವಿದ್ಯಾಪೀಠದ ಐಟಿಐ ಕಾಲೇಜಿನ ಸಿಬ್ಬಂದಿ ವರ್ಗ, ರೇವಣಸಿದ್ದಪ್ಪ ಪಟ್ಟಣಶೆಟ್ಟರ ಹಾಗೂ ಶೀಲಾ ಸುರೇಶ ಸಗರದ ಸಾ. ಸಿಂಧನೂರ ಇವರು ವಹಿಸಿಕೊಂಡಿದ್ದರು. ಐಟಿಐ ಕಾಲೇಜು ಪ್ರಾಚಾರ್ಯ ಶ್ರೀಧರ ಪಾಟೀಲ ಉಪಸ್ಥಿತರಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ, ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಹಾಗೂ ಭಕ್ತರು ಉಪಸ್ಥಿತರಿದ್ದರು. ಸೋಮನಾಥ ಪುರಾಣಿಕ ಸ್ವಾಗತಿಸಿದರು. ಡಾ. ಉಮೇಶ ಪುರದ ಕಾರ್ಯಕ್ರಮ ನಿರೂಪಿಸಿದರು.
ಶಿರಹಟ್ಟಿಯ ಎಫ್.ಎಂ. ಡಬಾಲಿ ಕಾಲೇಜಿನ ಉಪನ್ಯಾಸಕರಾದ ಸುಧಾ ಹುಚ್ಚಣ್ಣವರ `ತಾಯಿ ಮತ್ತು ಸಂಸ್ಕೃತಿ’ ವಿಷಯದ ಕುರಿತು ಮಾತನಾಡುತ್ತಾ, ಭಾರತ ವೈವಿಧ್ಯತೆಯಲ್ಲಿ ಸಂಸ್ಕಾರ ಕಂಡ ದೇಶ. ಇಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆ ಇದೆ. ತಾಯಿ ಸಂಸ್ಕಾರದ ಪ್ರತೀಕ. ತಾಯಿಯ ಸಂಸ್ಕಾರದಿAದ ಮಕ್ಕಳು ಒಳ್ಳೆಯವರಾಗುತ್ತಾರೆ. ಆಧುನಿಕ ಜಗತ್ತಿನಲ್ಲಿ ತಾಯಿಯ ಸಂಸ್ಕಾರ ಮುಖ್ಯ. ವೃದ್ಧಾಶ್ರಮಗಳು ನಶಿಸಿ ಮತ್ತೆ ಮಾತೃ ದೇವೋಭವ ಮೊಳಗಬೇಕಾಗಿದೆ. ಮದರ್ ತೆರೇಸಾ, ಸಾಲುಮರದ ತಿಮ್ಮಕ್ಕ ಮುಂತಾದ ಮಹಿಳೆಯರ ಆದರ್ಶಗಳ ಪಾಲನೆಯಾಗಬೇಕಾಗಿದೆ ಎಂದು ತಿಳಿಸಿದರು.