ಬೆಂಗಳೂರು: ಜಿಎಸ್ ಟಿ ಕಡಿತ ಮತ್ತು ಸರಳೀಕರಣ ಮಾಡಲು ತೀರ್ಮಾನಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಅವರು, ಜಿಎಸ್ ಟಿ ಸರಳೀಕರಣದಿಂದ ದೇಶದ ಜಿಡಿಪಿ ಎರಡಂಕಿಗೆ ಹೆಚ್ಚಳವಾಗಲಿದ್ದು, ಭಾರತ ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಿಂದ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.
ನಿಮ್ಮ ನಾಯಕತ್ವದಲ್ಲಿ ನಮ್ಮ ದೇಶದ ಆರ್ಥಿಕತೆ ಬಲಗೊಳಿಸಲು ಬಲಿಷ್ಠ ಮತ್ತು ಪರಿಣಾಮಕಾರಿ ಸುಧಾರಣೆಗಳನ್ನು ತರುತ್ತಿರುವುದಕ್ಕೆ ನಿಮಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ ಹಾಗೂ ನಿಮ್ಮ ಬದ್ದತೆಯಿಂದಾಗ ದೇಶದ ತೆರಿಗೆ ಕಾಯ್ದೆಗಳ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಜಿಎಸ್ ಟಿ ಜಾರಿ ಮಾಡುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದ್ದೀರಾ ಎಂದು ತಿಳಿಸಿದ್ದಾರೆ.
ಕೆಂದ್ರ ಸರ್ಕಾರಕ್ಕೆ ಜಿಎಸ್ ಟಿ ಜಾರಿ ಅತ್ಯಂತ ಸವಾಲಿನ ಕೆಲಸವಾಗಿತ್ತು. ಆರಂಭದಲ್ಲಿ ರಾಜ್ಯಗಳೂ ಕೂಡ ಹಿಂಜರಿಕೆಯಿಂದಲೇ ಜಿಎಸ್ ಟಿ ಜಾರಿಗೊಳಿಸಲು ತೀರ್ಮಾನಿಸಿದವು. ಸ್ವಲ್ಪ ಸಮಯದ ನಂತರ ರಾಜ್ಯಗಳಿಗೂ ಜಿಎಸ್ ಟಿ ಮಹತ್ವದ ಅರಿವಾಯಿತು. ತೆರಿಗೆ ಸಂಗ್ರಹ ಹೆಚ್ಚಳ ಮಾಡುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸವಾಲಿನ ಕೆಲಸವಾಗಿತ್ತು. ಜಿಎಸ್ ಟಿ ಕೇವಲ ತೆರಿಗೆಯ ಬುನಾದಿಯಲ್ಲ. ಅದು ಆರ್ಥಿಕ ಬೆಳವಣಿಗೆಯ ಬುನಾದಿ. ನಿಮ್ಮ ನಾಯಕತ್ವದಲ್ಲಿ ಜಿಎಸ್ ಟಿ ಕೌನ್ಸಿಲ್ ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಇದು ನಮ್ಮ ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಲಗೊಳಿಸುವಲ್ಲಿ ನಿಮ್ಮ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ಜಿಎಸ್ ಟಿ 2 ಮುಂದಿನ ತಲೆಮಾರಿನ ಸುಧಾರಣೆ ಕ್ರಮವಾಗಿದ್ದು, ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀವು ನನಗೆ ಜಿಎಸ್ ಟಿ ಕೌನ್ಸಿಲ್ ನ ಮಂತ್ರಿಗಳ ತಂಡದ ನಾಯಕತ್ವ ವಹಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದಕ್ಕೆ ನಿಮಗೆ ವಯಕ್ತಿಕವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಆ ಸಮಯದಲ್ಲಿ ಜಿಎಸ್ ಟಿ ತೆರಿಗೆ ಸುಧಾರಣೆಯಲ್ಲಿ ಸಾಕಷ್ಟು ಸಲಹೆಗಳನ್ನು ನೀಡಲಾಗಿದೆ. ಪ್ರಸ್ತುತ ನೀವು ವಯಕ್ತಿಕ ಮುತುವರ್ಜಿ ವಹಿಸಿ ಜಿಎಸ್ ಟಿ ಕೌನ್ಸಿಲ್ ನ ಜವಾಬ್ದಾರಿ ತೆಗೆದುಕೊಂಡಿದ್ದು,
ಜಿಎಸ್ ಟಿ ತೆರಿಗೆ ಸುಧಾರಣೆ ಮತ್ತು ಸ್ಲ್ಯಾಬ್ ಕಡಿತ ಮಾಡಲು ತೀರ್ಮಾನಿಸಿದ್ದು, ಈ ತೀರ್ಮಾನವನ್ನು ಇಡೀ ದೇಶ ಮುಕ್ತ ಮನಸ್ಸಿನಿಂದ ಸ್ವಾಗತಿಸಿದೆ. ವಿಶೇಷವಾಗಿ ವಾಣಿಜ್ಯೋದ್ಯಮ ಸಮುದಾಯ ಸ್ವಾಗತಿಸಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಸಾಕಷ್ಟು ವಾಣಿಜ್ಯ ವಹಿವಾಟುಗಳು ಜಿಎಸ್ ಟಿ ವ್ಯಾಪ್ತಿಗೆ ಒಳಪಡಲಿವೆ. ಇದರಿಂದ ತೆರಿಗೆ ಸಂಗ್ರಹ ಹೆಚ್ಚಳವಾಗಲಿದೆ. ಅಲ್ಲದೇ ದೇಶದ ಜಿಡಿಪಿ ಎರಡಂಕಿಗೆ ಹೆಚ್ಚಳವಾಗುವ ನಂಬಿಕೆ ಇದೆ ಎಂದು ತಿಳಿದಿದ್ದಾರೆ.