ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ರಾಜ್ಯದಲ್ಲಿ ಬರಗಾಲ ಬಂದರೆ ಪರಿಹಾರ ಕೊಡಲಿಲ್ಲ, ರೈತರಿಗೆ ಏನೂ ಕೊಡಲಿಲ್ಲ, ರಸ್ತೆ ದುರಸ್ತಿ ಮಾಡಲು ಸಹ ಹಣ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಜಿ ಸಚಿವ ಕಳಕಪ್ಪ ಬಂಡಿ ಗೃಹ ಕಚೇರಿಯಲ್ಲಿ ರವಿವಾರ ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರಿಂದ ಕಾರ್ಯಕರ್ತರಿಗೆ, ಮತದಾರರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು ಬಜೆಟ್ನಲ್ಲಿ ರಾಜ್ಯ ರೈಲ್ವೆಗೆ 7329 ಸಾವಿರ ಕೋಟಿ, ಬಂಡವಾಳ ಹೂಡಿಕೆಗೆ 6280 ಸಾವಿರ ಕೋಟಿ ಸೇರಿ ಹಲವಾರು ವಿಭಾಗಗಳಲ್ಲಿ ಬಜೆಟ್ನಲ್ಲಿ ಆದ್ಯತೆ ನೀಡಿದೆ ಎಂದ ಅವರು, ಒಕ್ಕಲುತನವೇ ಪ್ರಧಾನವಾಗಿರುವ ರೋಣ ಮತಕ್ಷೇತ್ರದಲ್ಲಿ ಪ್ರಧಾನಮಂತ್ರಿ ಗ್ರಾಮ್ ಸಡಕ್ ಮೂಲಕ ರಸ್ತೆಗಳ ನಿರ್ಮಾಣ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸುವೆ. ಕಾರವಾರ-ಇಲಕಲ್ ರಾಷ್ಟ್ರೀಯ ಹೆದ್ದಾರಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದು, ಮತಕೇತ್ರವು ಬಾಗಶಃ ರಾಷ್ಟ್ರೀಯ ಹೆದ್ದಾರಿಗೆ ಒಳಪಡಲಿದೆ. ಧಾರವಾಡ-ಕಲ್ಬುರ್ಗಿ ಡಿಪಿಆರ್ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಾಣದ ಪಟ್ಟಿಗೆ ಸೇರಿಸುವ ಕೆಲಸವನ್ನು ಮಾಡುತ್ತೇನೆ ಎಂದರು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನ ತಿರುಚಿ ಎಲ್ಲರನ್ನು ಜೈಲಿಗೆ ಹಾಕಿದ ಖ್ಯಾತಿ ಕಾಂಗ್ರೆಸ್ಗೆ ಸಲ್ಲುತ್ತದೆ. ಮುಸ್ಲಿಂ ಹೆಣ್ಣು ಮಕ್ಕಳಿಗೆ ವಿಚ್ಛೇದನವಾದರೆ ಮಹಿಳೆಯರಿಗೆ ಹಣಕಾಸಿನ ನೆರವು ಮಾಡಬೇಕು ಎಂದು ಸುಪ್ರೀಂ ಕೋರ್ಟ್ನ ಆದೇಶ ಬಂದರೆ, ಅದನ್ನು ಮಾಡಬೇಕಾಗುತ್ತದೆ ಎಂದು ಸಂವಿಧಾನಕ್ಕೆ ತಿದ್ದುಪಡಿ ತಂದು ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಪಕ್ಷವೇ ಆಗಿದೆ ಎಂದರು.
ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ನಮ್ಮ ಸಂಸದರು ಮಾದರಿಯಾಗಬೇಕು ಎಂದು ಬಯಸುತ್ತೇವೆ. ಆದರೆ ಗುಡಿಗೆ, ಸಮುದಾಯ ಭವನಕ್ಕೆ ಅನುದಾನ ಕೇಳಲು ಬಂದರೆ ಹೇಗೆ ಸಂಸದರು ಮಾದರಿಯಾಗುತ್ತಾರೆ. ಸಂಸದರು 50 ಪ್ರತಿಶತ ಅನುದಾನವನ್ನು ಸರ್ಕಾರಿ ಶಾಲಾ ಅಭಿವೃದ್ಧಿಗಳಿಗೆ, ಇನ್ನುಳಿದ ಅನುದಾನವನ್ನು ಜನತೆಯ ಬೇಡಿಕೆಗಳಿಗೆ ಬಳಸಲು ಮುಂದಾಗಿ ಎಂದರು.
ಇಂದಿರಾ ತೇಲಿ, ಬಿ.ಎಂ. ಸಜ್ಜನರ, ನಿಂಗಪ್ಪ ಕೆಂಗಾರ ಮಾತನಾಡಿದರು. ರಾಜು ಕುರಡಗಿ, ಎಂ.ಎಸ್. ಕರಿಗೌಡ್ರ, ವೀರಪ್ಪ ಪಟ್ಟಣಶೆಟ್ಟಿ, ಶಿವಾನಂದ ಮಠದ, ಉಮೇಶ ಮಲ್ಲಾಪೂರ, ಬಸವರಾಜ ಬಂಕದ, ಸಿದ್ದಣ್ಣ ಬಳಿಗೇರ, ಸುಭಾಸ ಮ್ಯಾಗೇರಿ, ರೂಪೇಶ ರಾಠೋಡ, ಲಕ್ಷ್ಮಿ ಮುಧೋಳ, ರಾಜೇಂದ್ರ ಘೋರ್ಪಡೆ, ಉಮೇಶ ಚನ್ನುಪಾಟೀಲ, ಶ್ರೀನಿವಾಸ ಸವದಿ ಸೇರಿ ಇತರರು ಇದ್ದರು.
ಸಂವಿಧಾನಕ್ಕೆ ಅಪಚಾರ ಮಾಡಿದ್ದು ಕಾಂಗ್ರೆಸ್ ಹೊರತು ಬಿಜೆಪಿಯಲ್ಲ. ರಾಜ್ಯ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಸಿದ್ಧವಿದ್ದೇವೆ. ಉತ್ತರ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದ್ದು, ಅದು ರೋಣ ಮತಕ್ಷೇತ್ರದಿಂದ ಪ್ರಾರಂಭವಾಗುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.