ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ, ನೂತನ ವರ್ಷದ ಶುಭಾಶಯ ಕೋರಿದರು.
ಪ್ರಥಮ ಬಾರಿಗೆ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು ಚುನಾವಣೆಯ ಸಂದರ್ಭದಲ್ಲಿ ಸ್ವತಃ ಬೆಳಗಾವಿ ನಗರಕ್ಕೆ ಆಗಮಿಸಿ, ಅತ್ಯುತ್ತಮ ಸಹಕಾರ ನೀಡಿದ್ದನ್ನು ಸಂಸದರು ಸ್ಮರಿಸಿದರು. ಸಂಸದರು ಸನ್ಮಾನಿಸಲು ಹೋದಾಗ ನಾನು ಸಾಮಾನ್ಯ ಕಾರ್ಯಕರ್ತ ಸನ್ಮಾನ ಬೇಡ ಎಂದು ಕುಟುಂಬದ ಆತ್ಮೀಯ ಸದಸ್ಯರಂತೆ ಸಂಸದರ ಕುಶಲೊಪರಿಯನ್ನು ಪ್ರಧಾನಮಂತ್ರಿಗಳು ವಿಚಾರಿಸಿದರು.
ಈ ಸಮಯದಲ್ಲಿ ಸಂಸದರು ಸವದತ್ತಿಯ ಶ್ರೀ ಕ್ಷೇತ್ರ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನದ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಕ್ಕೆ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ತಿಳಿಸಿ, ಅದೇ ರೀತಿಯಲ್ಲಿ ರಾಮದುರ್ಗದಲ್ಲಿರುವ ಐತಿಹಾಸಿಕ ಶಬರಿ ಕೊಳ್ಳವನ್ನು ಸಹ ಅಭಿವೃದ್ಧಿಪಡಿಸುವಂತೆ ವಿನಂತಿಸಿದರು. ಬೆಂಗಳೂರು-ಧಾರವಾಡದ ನಡುವೆ ಸದ್ಯ ಸಂಚರಿಸುತ್ತಿರುವ ವಂದೇ ಭಾರತ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಬೆಳಗಾವಿಯವರೆಗೆ ವಿಸ್ತರಿಸಿ ಬೆಳಗಾವಿ ಜಿಲ್ಲಾ ನಿವಾಸಿಗಳ ಅನೇಕ ದಿನಗಳ ಬೇಡಿಕೆಯನ್ನು ಪರಿಗಣಿಸುವಂತೆ ವಿನಂತಿಸಿದರು.
ಬೇಡಿಕೆಯನ್ನು ಅವಲೋಕಿಸಿದ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಈಡೇರಿಸುವ ಬಗ್ಗೆ ಕೇಂದ್ರ ರೈಲ್ವೆ ಸಚಿವರಿಗೆ ಸೂಚಿಸುವ ಕುರಿತು ಭರವಸೆಯನ್ನು ನೀಡಿರುವುದಾಗಿ ಸಂಸದ ಜಗದೀಶ ಶೆಟ್ಟರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.