ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಆದರಹಳ್ಳಿ ಘಟನೆಗೆ ಸಂಬಂಧಿಸಿದಂತೆ ರವಿವಾರ ಮುಂಜಾನೆಯಿಂದ ಗವಿಸಿದ್ದೇಶ್ವರಮಠದ ಕುಮಾರ ಮಹಾರಾಜರು ಘಟನೆಗೆ ಕಾರಣರಾದವರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ಕೈಗೊಂಡಿದ್ದು, ಭೋವಿ, ಲಂಬಾಣಿ ಹಾಗೂ ಪೋಲೀಸ್ ಅಧಿಕಾರಿಗಳು ಮತ್ತು ಮುಖಂಡರ ಸಂಧಾನದ ಮೇಲೆ ಪ್ರತಿಭಟನೆ ಕೈಬಿಟ್ಟಿದ್ದು ಗಲಾಟೆ ವಿಷಯವು ಶಾಂತಿಯುತವಾಗಿ ಬಗೆಹರಿದಿದೆ. ಎಲ್ಲರ ಭರವಸೆ ಮೇರೆಗೆ ಪ್ರತಿಭಟನೆಯನ್ನು ಶ್ರೀಗಳು ಹಿಂತೆಗೆದುಕೊಂಡರು.
ಭೋವಿ ಮತ್ತು ಲಂಬಾಣಿ ಸಮಾಜದ ಯುವಕರು 2-3 ದಿನಗಳ ಹಿಂದೆ ಮಾಡಿಕೊಂಡಿದ್ದ ಗಲಾಟೆ ಸಮಾಜಗಳ ನಡುವೆ ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತಿತ್ತು, ಶ್ರೀಗಳು ಇದರಲ್ಲಿ ಮಧ್ಯಪ್ರವೇಶಿಸಿ ಹೋರಾಟಕ್ಕೆ ಮುಂದಾಗಿದ್ದರು. ಆದರೆ ಹಿರಿಯರು ಸೇರಿ ಮದ್ಯಾಹ್ನದಿಂದಲೇ ಮಾತುಕತೆ ನಡೆಸಿ ರಾಜಿ ಸಂಧಾನ ಮಾಡುವಲ್ಲಿ ಯಶಸ್ವಿಯಾದರು.
ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಪರಸ್ಪರ ಹೊಂದಾಣಿಕೆ ಮಾತುಗಳು ನಡೆದು, ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಂಜುನಾಥ ಮಾಗಡಿ, ನೀಲಪ್ಪ ಶರಸೂರಿ, ಪಿಎಸ್ಐ ಈರಪ್ಪ ರಿತ್ತಿ, ಭೋವಿ ಮತ್ತು ಲಂಬಾಣಿ ಸಮಾಜದ ಮುಖಂಡರು, ಯುವಕರು ಗ್ರಾಮಸ್ಥರು ಇದ್ದರು.