ರತ್ನಾ ಸಿ.ಯಳಮಲಿ ನಿಧನ; ನೇತ್ರದಾನ
ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ರಾಜೀವ ಗಾಂಧಿ ನಗರದ ಈಶ್ವರ ಬಡಾವಣೆಯ (4ನೇ ಅಡ್ಡರಸ್ತೆ) ನಿವಾಸಿ ಶ್ರೀಮತಿ ರತ್ನಾ ಸಿದ್ಧರಾಮಪ್ಪ ಯಳಮಲಿ (82) ಅವರು ಫೆ. 20ರಂದು ಸಂಜೆ 4 ಗಂಟೆಗೆ ನಿಧನರಾದರು. ಮೃತರಿಗೆ ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳಿದ್ದಾರೆ. ಗದಗ ಜಿಲ್ಲಾ ಗೃಹರಕ್ಷಕ ದಳದ ಮಾಜಿ ಸಮಾದೇಶಕರಾದ ವಿಶ್ವನಾಥ ಯಳಮಲಿ ಮೃತರ ಪುತ್ರರಲ್ಲಿ ಓರ್ವರಾಗಿದ್ದಾರೆ.
ದೇಹದಾನ ಹಾಗೂ ನೇತ್ರದಾನದ ಪತ್ರಕ್ಕೆ ಸ್ವಯಂಸ್ಫೂರ್ತಿಯಿಂದ ಒಪ್ಪಿಗೆಯ ಸಹಿ ಮಾಡಿದ್ದ ಶ್ರೀಮತಿ ರತ್ನಾ ಅವರ ಇಚ್ಛೆಯಂತೆ ನೇತ್ರದಾನ ಮಾತ್ರ ಮಾಡಲು ಅವಕಾಶವಾಯಿತು. ಫೆ. 21ರಂದು ಶನಿವಾರ ಮುಂಜಾನೆ 11 ಗಂಟೆಗೆ ಈಶ್ವರ ಬಡಾವಣೆಯ ಮೃತರ ನಿವಾಸದಿಂದ ಅಂತ್ಯಯಾತ್ರೆ ಹೊರಡಲಿದೆ.
ಗದಗ-ಬೆಟಗೇರಿ ಲಯನ್ಸ್ ಕ್ಲಬ್ನ ಪ್ರೇರಣೆಯಿಂದಾಗಿ ಕುಟುಂಬಸ್ಥರು ಮೃತರ ನೇತ್ರದಾನ ಮಾಡಲು ಒಪ್ಪಿಗೆ ಸೂಚಿಸಿದ್ದು, ಗದಗ ಜಿಮ್ಸ್ನ ನೇತ್ರ ತಜ್ಞರ ತಂಡ ನೇತ್ರದಾನ ಪ್ರಕ್ರಿಯೆ ಕೈಗೊಂಡರು. ಈ ಸಂದರ್ಭದಲ್ಲಿ ವಿಶ್ವನಾಥ ಯಳಮಲಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಖಜಾಂಚಿ ರೇಣುಕಪ್ರಸಾದ ಹಿರೇಮಠ, ರಮೇಶ್ ಶಿಗ್ಲಿ ಹಾಗೂ ಕುಟುಂಬದ ಸದಸ್ಯರಿದ್ದರು.
ಮೃತ ವ್ಯಕ್ತಿಯ ನೇತ್ರದಾನ ಮಾಡಿ ಮಾನವೀಯತೆ ಮೆರೆಯುವ ಮೂಲಕ ಅಂಧರು ಕಣ್ತೆರೆಯುವಂತೆ ನೇತ್ರದಾನವನ್ನು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಅಂಗರಚನಾ ಶಾಸ್ತ್ರದ ಅಧ್ಯಯನಕ್ಕಾಗಿ ದೇಹದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಕಂಡುಕೊಳ್ಳುವ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಕ್ಲಬ್ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.



