ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ ಪ್ರಗತಿಯಲ್ಲಿರುವ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಸವದತ್ತಿಯ ಜಾಕವೆಲ್ ಪೈಪಲೈನ್ ಮತ್ತು ಹಿರೇಉಳ್ಳಿಗೇರಿ ಗ್ರಾಮದ ಹತ್ತಿರ ಇರುವ ನೀರು ಶುದ್ಧೀಕರಣ ಘಟಕ ಹಾಗೂ ನರೇಂದ್ರ ಗ್ರಾಮದ ಹತ್ತಿರ ಇರುವ ಪಂಪಿಂಗ್ ಸ್ಟೇಶನ್ಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ವೀಕ್ಷಿಸಿದರು.
ಸದರಿ ಯೋಜನೆಯಡಿಯಲ್ಲಿ 388 ಜನ ವಸತಿಗಳಿಗೆ ಮಲಪ್ರಭಾ ನದಿಯಿಂದ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತದೆ. ಸದರಿ ಕಾಮಗಾರಿಯಲ್ಲಿ ಪ್ರಸ್ತುತ ಜಾಕ್ವೆಲ್ ಕಾಮಗಾರಿ ಶೇ. 90ರಷ್ಟು ಪೂರ್ಣಗೊಂಡಿದೆ. ಏಪ್ರಿಲ್ ಮಾಹೆಯ ಒಳಗಾಗಿ ಜಾಕ್ವೆಲ್ ಕಾಮಗಾರಿಯನ್ನು ಪೂರ್ಣಗೊಳಿಸಲು ಸಿಇಓ ಭುವನೇಶ ಪಾಟೀಲ ಸೂಚಿಸಿದರು.
ಸದರಿ ಯೋಜನೆಯಲ್ಲಿ ಒಟ್ಟು 1,654 ಕಿ.ಮಿ ಪೈಪ್ಲೈನ್ ಇದ್ದು, ಇದರಲ್ಲಿ ಈಗಾಗಲೇ 930 ಕಿ.ಮಿ ಪೈಪ್ಲೈನ್ ಅಳವಡಿಸಲಾಗಿದ್ದು, ಉಳಿದ ಪೈಪ್ಲೈನ್ ಅಳವಡಿಕೆಯಲ್ಲಿ ಮಳೆಗಾಲ ಪ್ರಾರಂಭದ ಪೂರ್ವದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಸೂಚಿಸಿದರು.
ಈ ಯೋಜನೆಯಲ್ಲಿ ಒಟ್ಟು 139 ಮೇಲ್ಮಟ್ಟದ ಜಲಾಗಾರಗಳಿದ್ದು, ಅದರಲ್ಲಿ 30 ಮೇಲ್ಮಟ್ಟ ಜಲಾಗಾರಗಳು ಪೂರ್ಣಗೊಂಡಿವೆ. 33 ಮೇಲ್ಮಟ್ಟ ಜಲಾಗಾರಗಳು ಪ್ರಗತಿಯಲ್ಲಿರುತ್ತವೆ. ಇನ್ನುಳಿದ ಮೇಲ್ಮಟ್ಟ ಜಲಾಗಾರಗಳ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಿ ತುರ್ತಾಗಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದರು.