HomeGadag Newsಅವ್ಯವಸ್ಥೆಗಳ ಆಗರವಾದ ಪುರಸಭೆ ಮಳಿಗೆಗಳು

ಅವ್ಯವಸ್ಥೆಗಳ ಆಗರವಾದ ಪುರಸಭೆ ಮಳಿಗೆಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರಿನ ಪುರಸಭೆಗೆ ವಾಣಿಜ್ಯ ಮಳಿಗೆಗಳ ಸಂಕೀರ್ಣ ಅವ್ಯವಸ್ಥೆ, ಅಧ್ವಾನದ ಆಗರವಾಗಿದೆ. ಪಟ್ಟಣದ ಹೊಸ ಬಸ್‌ನಿಲ್ದಾಣದ ಹತ್ತಿರ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆಯಡಿ ಸುಮಾರು 25 ವರ್ಷಗಳ ಹಿಂದೆ ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. ಈ ವಾಣಿಜ್ಯ ಮಳಿಗೆಯಲ್ಲಿ ಒಟ್ಟು 29 ಮಳಿಗೆಗಳಿದ್ದು, ಇದರಲ್ಲಿ 25 ಮಳಿಗೆಗಳನ್ನು 20 ವರ್ಷದ ಲೀಜ್ ಆಧಾರದ ಮೇಲೆ ಮತ್ತು 4 ಮಳಿಗೆಗಳನ್ನು 12 ವರ್ಷದ ಲೀಜ್ ಆಧಾರದ ಮೇಲೆ ನೀಡಲಾಗಿದೆ.

ಟೆಂಡರ್ ಪಡೆದವರು ಯಾವುದೇ ಮಾರ್ಗಸೂಚಿಗಳನ್ನು ಪಾಲಿಸದೇ ಅಂಗಡಿಗಳನ್ನು ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳ ನಿಯಂತ್ರಣದಲ್ಲಿರುವ ಐಡಿಎಸ್‌ಎಂಟಿ ಮಳಿಗೆಗಳು ಅವರ ಸೂಚನೆಯಂತೆ ನಡೆಯುತ್ತವೆ. ಆದರೆ ಇಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೂ ತರದೆ, ಪುರಸಭೆಯ ಯಾವುದೇ ಅನುಮತಿಯೂ ಇಲ್ಲದೆ, ಯಾರದೋ ಹಿತಾಸಕ್ತಿಯಿಂದಾಗಿ ಮಳಿಗೆಯಲ್ಲಿ ಕಾನೂನು ಬಾಹಿರವಾಗಿ ನಡೆದುಕೊಳ್ಳಲಾಗುತ್ತಿದೆ. 20 ವರ್ಷಗಳಿಂದ ಯಾವ ಅವಧಿಯ ಚುನಾಯಿತ ಮಂಡಳಿ ಮತ್ತು ಅಧಿಕಾರಿಗಳು ಈ ಬಗ್ಗೆ ಚಕಾರವೆತ್ತದಿರುವುದು ಅಚ್ಚರಿಗೆ ಕಾರಣವಾಗಿದೆ.

ಸಂಕೀರ್ಣದಲ್ಲಿ ಮಾಂಸಾಹಾರಿ ಹೋಟೆಲ್, ಎಗ್ ರೈಸ್ ಅಂಗಡಿಗಳಿರುವುದರಿಂದ ಪಾನಮತ್ತರು ಮದ್ಯ ಸೇವಿಸಿ ಈ ಅಂಗಡಿಗಳ ಮುಂದೆ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿರುತ್ತಾರೆ. ಇದರಿಂದಾಗಿ ಈ ವಾಣಿಜ್ಯ ಮಳಿಗೆಯಲ್ಲಿನ ಎಸ್‌ಬಿಐನ ಎಟಿಎಂ, ಔಷಧಿ ಅಂಗಡಿ, ಬೇಕರಿ ಹಾಗೂ ಹೂವು-ಹಣ್ಣು ಮಾರಾಟ ಮಳಿಗೆಗಳಿಗೆ ಬರುವ ಮಹಿಳೆಯರು, ಮಕ್ಕಳು, ಸಂಪ್ರದಾಯಸ್ಥರು ಭಯದಿಂದಲೇ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಾಡಿಗೆಯಿಂದ ಲಕ್ಷಾಂತರ ರೂಪಾಯಿ ಪುರಸಭೆಗೆ ಸಂದಾಯವಾಗುತ್ತಿದ್ದರೂ ಕಳೆದ 15 ವರ್ಷಗಳಿಂದ ಇಲ್ಲಿನ ಮಳಿಗೆಗಳ ಸ್ಥಿತಿ ಅಧೋಗತಿಗೆ ತಲುಪಿದೆ. ಇದು ಪುರಸಭೆಯ ಜವಾಬ್ದಾರಿಯನ್ನು ಪ್ರಶ್ನಿಸುವಂತಾಗಿದೆ.

ಸಂಕೀರ್ಣದ ಮುಂದೆ ನಾಲ್ಕೈದು ತಳ್ಳುಗಾಡಿಯ ಎಗ್‌ರೈಸ್, ಟಿಫನ್, ಚಹಾದ ಅಂಗಡಿಗಳಿಗೆ ಪರವಾನಿಗೆ ಕೊಟ್ಟಿದ್ದಾರೆ. ಇಲ್ಲಿನ ವ್ಯಾಪಾರಸ್ಥರು ತ್ಯಾಜ್ಯವನ್ನು ಚರಂಡಿಗೆ ಹಾಕುವುದರಿಂದ ಈ ಪ್ರದೇಶ ಗಬ್ಬು ನಾರುತ್ತಿದೆ. ಇಲ್ಲಿ ಕ್ಷಣ ಹೊತ್ತು ನಿಲ್ಲಲು ಆಗುವುದಿಲ್ಲ. ಆದರೂ ಸಂಬಂಧಿಸಿದ ಪುರಸಭೆ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ. ಸರ್ಕಾರದ ನಿಯಮದ ಪ್ರಕಾರ ವಾಣಿಜ್ಯ ಮಳಿಗೆಯ ಕಟ್ಟಡದಲ್ಲಿ ಮಾಂಸ, ಎಗ್ ರೈಸ್ ಮಾರಾಟ ನಿಷಿದ್ಧ. ಆದರೆ ಇಲ್ಲಿ ಸರ್ಕಾರದ ಆದೇಶಕ್ಕೆ ಯಾವುದೇ ಕಿಮ್ಮತ್ತು ಇಲ್ಲ.

ವಾಣಿಜ್ಯ ಸಂಕೀರ್ಣದಲ್ಲಿ ಮದ್ಯ ಮತ್ತು ಮಾಂಸದ ಅಂಗಡಿಗಳ ಕುರಿತು ಪುರಸಭೆಯವರನ್ನು ಪ್ರಶ್ನಿಸಿದಾಗ ಯಾವುದೇ ಅನುಮತಿ ಕೊಟ್ಟಿಲ್ಲವೆಂದು ಹೇಳುತ್ತಾರೆ. ಹಾಗಾದರೆ ಕಾನೂನು ಬಾಹಿರವಾಗಿ ನಡೆಯುತ್ತಿರುವ ವ್ಯಾಪಾರಕ್ಕೆ ರಕ್ಷಣೆ ಯಾರದು ಎಂಬುದಕ್ಕೆ ಜಿಲ್ಲಾಧಿಕಾರಿಗಳೇ ಉತ್ತರಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ವಾಣಿಜ್ಯ ಮಳಿಗೆಗಳಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವವನ್ನು ಪತ್ತೆಹಚ್ಚಿ ಅವರನ್ನು ಅಲ್ಲಿಂದ ತೆರವುಗೊಳಿಸಲಾಗುವುದು. ಅಲ್ಲದೆ ಮಾಂಸ ಮಾರಾಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ವ್ಯಾಪಾರಸ್ಥರು ಚರಂಡಿಯಲ್ಲಿ ಕಸ-ಮುಸುರೆ ಹಾಕದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ವರ್ಷ ಮಳಿಗೆ ಟೆಂಡರ್ ಅವಧಿ ಮುಗಿಯಲಿದ್ದು, ಮರು ಟೆಂಡರ್ ವೇಳೆ ನಿಯಮಾವಳಿಯಂತೆ ಮಳಿಗೆ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಇಲ್ಲಿ ಸಿದ್ಧಪಡಿಸಿ ಮಾರಾಟ ಮಾಡುವ ಆಹಾರದ ಗುಣಮಟ್ಟ, ಸ್ವಚ್ಛತೆ, ಕುಡಿಯುವ ನೀರು, ಡಸ್ಟ್ಬಿನ್‌ಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸುವುದಿಲ್ಲ. ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿ ಅನಧಿಕೃತ ವ್ಯಾಪಾರಸ್ಥರೇ ತುಂಬಿಕೊಂಡಿದ್ದು, ಮೂಲ ಮಾಲೀಕರೇ ಇಲ್ಲ. ನಿಯಮಾನುಸಾರ ಟೆಂಡರ್ ಪಡೆದವರು ಬೇರೆಯವರಿಗೆ ಬೇರೆ ಉದ್ದೇಶಕ್ಕೆ ಅಂಗಡಿ ಕೊಡುವಂತಿಲ್ಲ. ಅಲ್ಲದೆ ಇಡೀ ಕಟ್ಟಡದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು, ಈ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದಕ್ಕೆ ಪ್ರಭಾವಿಗಳ ಶ್ರೀರಕ್ಷೆ ಇದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಡಿ ಆರೋಪಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!