ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನಿರೀಕ್ಷೆಯಲ್ಲಿದ್ದ ದರ್ಶನ್ಗೆ ಮತ್ತೆ ನಿರಾಸೆ ಆಗಿದ್ದು, ಅ.8 ಕ್ಕೆ ವಿಚಾರಣೆ ಮುಂದೂಡಿಕೆ ಆಗಿದೆ.
ಇಂದು ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಅವರು ಸುದೀರ್ಘ ವಾದ ಮಂಡಿಸಿದರು. ಪ್ರತಿವಾದಕ್ಕೆ ಎಸ್ಪಿಪಿ ಅವಕಾಶ ಕೇಳಿದರು. ಹೀಗಾಗಿ ವಿಚಾರಣೆಯನ್ನು ಮಂಗಳವಾರಕ್ಕೆ ಕೋರ್ಟ್ ಮುಂದೂಡಿಕೆ ಮಾಡಿದೆ.
ಆರೋಪಿಗಳಾದ ಪವಿತ್ರಾಗೌಡ ಮತ್ತು ರವಿಶಂಕರ್ ಜಾಮೀನು ಅರ್ಜಿ ವಿಚಾರಣೆಯನ್ನೂ ಮಂಗಳವಾರಕ್ಕೆ ಮುಂದೂಡಲಾಗಿದೆ. ಅಂದು ಮಧ್ಯಾಹ್ನ 12:30 ಕ್ಕೆ ವಿಚಾರಣೆ ನಡೆಯಲಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್ ಪರ ವಕೀಲ ಸುನೀಲ್, ಪ್ರಕರಣ ಸಂಬಂಧ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದಾರೆ. ಪ್ರಕರಣವನ್ನು ಹೇಗೆ ತಿರುಚಿದ್ದಾರೆ, ಹೇಗೆ ದರ್ಶನ್ ಸೇರಿ ಇತರೆ ಆರೋಪಿಗಳನ್ನು ಸಿಲುಕಿಸಿದ್ದಾರೆ ಅಂತಾ ವಾದ ಮಾಡಿದ್ರು. ವಾದವನ್ನು ಆಲಿಸಿದ ನ್ಯಾಯಾಲಯ ಮಂಗಳವಾರಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ ಎಂದು ತಿಳಿಸಿದರು.
ಮಂಗಳವಾರ ಇತರೆ ಆರೋಪಿಗಳ ಪರ ವಕೀಲರು ವಾದ ಮಂಡನೆ ಮಾಡ್ತಾರೆ. ಪೊಲೀಸರ ತನಿಖೆಯಲ್ಲಿನ ಲೋಪಗಳು ಮತ್ತು ಉಲ್ಲಂಘನೆಗಳ ಬಗ್ಗೆ ವಾದ ಮಂಡಿಸಲಿದ್ದಾರೆ. ನಂತರ ಎಸ್ಪಿಪಿಗೆ ವಾದಕ್ಕೆ ಅವಕಾಶ ನೀಡಲಾಗುವುದು. ಎರಡು ಕಡೆ ವಾದದ ನಂತರ ನ್ಯಾಯಾಲಯ ಅದೇಶ ನೀಡಲಿದೆ ಎಂದು ಹೇಳಿದರು.