ವಿಜಯಸಾಕ್ಷಿ ಸುದ್ದಿ, ಗದಗ: ಸಂಗೀತ ಆಲಿಸುವುದರಿಂದ ಮನಸ್ಸಿಗೆ ಸಮಾಧಾನ, ನೆಮ್ಮದಿ ಸಿಗುತ್ತದೆ. ಮನುಷ್ಯನಿಗೆ ಇಂದು ಬೇಕಾಗಿರುವುದು ಕೂಡ ಅದೇ ಆಗಿದೆ ಎಂದು ಅರಳಹಳ್ಳಿಯ ಗವಿಶಿದ್ದಯ್ಯ ಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ಹರ್ಲಾಪೂರ ಗ್ರಾಮದ ಶ್ರೀ ಗುರು ಬಸವಾನಂದ ಸಾಂಸ್ಕೃತಿಕ ಸೇವಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಗಾನ ಲಹರಿ ಸಂಗಿತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಾನವ ಎಲ್ಲದರಲ್ಲೂ ಮುಂದೆ ಇದ್ದಾನೆ. ಆದರೆ ಮನಸ್ಸಿಗೆ ನೆಮ್ಮದಿ ಪಡೆಯುವಲ್ಲಿ ಹಿಂದೆ ಇದ್ದಾನೆ. ಜೀವವನ್ನು ಕೊಡುವ ಶಕ್ತಿ ಜೀವನಪುರಿ ರಾಗಕ್ಕೆ ಇದ್ದರೆ, ಮೇಘ ಮಲಾರ ರಾಗಕ್ಕೆ ಮಳೆ ತರಿಸುವ ಶಕ್ತಿ ಇದೆ. ಸಂಗೀತಕ್ಕೆ ಸೋಲದೆ ಇರುವ ಮನಸ್ಸುಗಳು ಇಲ್ಲ. ಸೋಲದಿದ್ದರೆ ಅವು ಮನಸ್ಸುಗಳೇ ಅಲ್ಲ ಎಂದು ಆಶೀರ್ವಚನ ನೀಡಿದರು.
ಶರಯ್ಯಸ್ವಾಮಿ ವಕೀಲರು ಕಾರ್ಯಕ್ರಮ ಉದ್ಘಾಟಿಸಿದರು. ಫಕ್ಕಿರಪ್ಪ ತಳವಾರ, ಗ್ರಾ.ಪಂ ಮಾಜಿ ಅಧ್ಯಕ್ಷ ಶರಣಪ್ಪ ತೋಟದ, ಶರಣಪ್ಪ ಸರಗಣಾಚಾರ್ಯ, ಫಕ್ಕಿರಯ್ಯಸ್ವಾಮಿ ಹರ್ತಿಮಠ ಮುಂತಾದವರು ಉಪಸ್ಥಿತರಿದ್ದರು. ಬಸವರಾಜ ವಂದಿಸಿದರು.