ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಸದ್ಯ ಸಿನಿಮಾಗೆ ಗುಡ್ ಬಾಯ್ ಹೇಳಿ ಫುಲ್ ಟೈಂ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. . ತಮಿಳಗ ವೆಟ್ರಿ ಕಳಗಂ ಪಕ್ಷದ ಮೂಲಕ ರಾಜಕೀಯ ಎಂಟ್ರಿ ಘೋಷಿಸಿದ ವಿಜಯ್ ವಿರುದ್ಧ ಇದೀಗ ಮುಸ್ಲಿಂ ಧರ್ಮಗುರು ಗರಂ ಆಗಿದ್ದಾರೆ.
ನಟ ವಿಜಯ್ ಇತ್ತೀಚಿಗಷ್ಟೇ ಚೆನ್ನೈನ ರಾಯಪೆಟ್ಟಾದ ವೈಎಂಸಿಎ ಕ್ರೀಡಾಂಗಣದಲ್ಲಿ ತಮ್ಮ ಪಕ್ಷದ ವತಿಯಿಂದ ಇಫ್ತಾರ್ ಕೂಟ ಆಯೋಜಿಸಿದ್ದರು. ಆದರೆ ಈ ಇಫ್ತಾರ ಕೂಟದ ವಿರುದ್ಧ ಈಗಾಗಲೇ ತಮಿಳುನಾಡಿನ ಮುಸ್ಲಿಮರು ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಅಖಿಲ ಭಾರತ ಮುಸ್ಲಿಂ ಜಮಾತ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ವಿಜಯ್ ವಿರುದ್ಧ ಫತ್ವಾ ಹೊರಡಿಸಿದ್ದು, ಅವರ ಕಾರ್ಯಕ್ರಮಗಳಿಗೆ ಹೋಗದಂತೆ ತಮಿಳುನಾಡು ಮುಸ್ಲಿಮರಿಗೆ ಆದೇಶಿಸಿದ್ದಾರೆ.
ತಮಿಳು ನಟ ವಿಜಯ್ ದಳಪತಿ ವಿರುದ್ಧ ಅಖಿಲ ಭಾರತ ಮುಸ್ಲಿಂ ಜಮಾತ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಫತ್ವಾ ಹೊರಡಿಸಿದ್ದಾರೆ. ಮುಸ್ಲಿಮರು ವಿಜಯ್ ಅವರಿಂದ ದೂರವಿರಬೇಕೆಂದು ಅವರು ಆದೇಶಿಸಿದ್ದಾರೆ. ದಳಪತಿ ವಿಜಯ್ ಮುಸ್ಲಿಂ ವಿರೋಧಿ ಭಾವನೆಗಳ ಇತಿಹಾಸವನ್ನು ಹೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯ್ ನಟನೆಯ “ದಿ ಬೀಸ್ಟ್” ಸಿನಿಮಾದ ಬಗ್ಗೆ ಮೌಲಾನಾ ಶಹಾಬುದ್ದೀನ್ ರಜ್ವಿ ಆಕ್ರೋಶ ವ್ಯಕ್ತಪಡಿಸಿದ್ದು ದಿ ಬೀಸ್ಟ್ ಚಿತ್ರದಲ್ಲಿ ಮುಸ್ಲಿಂ ಸಮುದಾಯವನ್ನು ಭಯೋತ್ಪಾದಕರಂತೆ ಬಿಂಬಿಸಲಾಗಿದೆ. ಚಿತ್ರದಲ್ಲಿ ಮುಸ್ಲಿಮರನ್ನು ರಾಕ್ಷಸರು ಮತ್ತು ದೆವ್ವಗಳಂತೆ ಚಿತ್ರಿಸಲಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟ ವಿಜಯ್ ಅವರು ಮುಸ್ಲಿಮರ ಪರ ಇಲ್ಲ, ಮುಸ್ಲಿಂ ವಿರೋಧಿ ಭಾವನೆ ಹೊಂದಿದ್ದಾರೆ. ಈಗ ಅವರು ತಮಿಳುನಾಡು ರಾಜಕೀಯಕ್ಕೆ ಪ್ರವೇಶಿಸುತ್ತಿರುವುದರಿಂದ ಅವರಿಗೆ ಮುಸ್ಲಿಂ ಮತಗಳು ಬೇಕಾಗಿದೆ. ಹೀಗಾಗಿ ಇದೀಗ ಈಗ ಅವರು ಬರೀ ವೋಟ್ಗಾಗಿ ಮುಸ್ಲಿಂ ತುಷ್ಟೀಕರಣವನ್ನು ಮಾಡುತ್ತಿದ್ದಾರೆ ಅಂತ ಮೌಲಾನಾ ಆರೋಪಿಸಿದ್ದಾರೆ.