ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮದೇ ಪಕ್ಷ ಸ್ಥಾಪನೆ ಮಾಡಿರುವ ವಿಜಯ್ ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ತಮ್ಮ ಪಕ್ಷಕ್ಕೆ ವಿವಿಧ ಸಮುದಾಯದ ಬೆಂಬಲ ಪಡೆದುಕೊಳ್ಳುವ ಪ್ರಯತ್ನದಲ್ಲಿರುವ ವಿಜಯ್ ಇತ್ತೀಚೆಗಷ್ಟೆ ಪಕ್ಷದ ವತಿಯಿಂದ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಈ ವೇಳೆ ಮುಸ್ಲೀಮರು ತೊಡುವ ಟೋಪಿ ತೊಟ್ಟು ನಮಾಜು ಮಾಡಿದ್ದರು. ಆದರೆ ಇದೀಗ ಅದೇ ವಿಜಯ್ ಗೆ ಮುಳುವಾಗಿದೆ.
ವಿಜಯ್ ವಿರುದ್ಧ ಇಸ್ಲಾಂ ಧರ್ಮೀಯರಿಂದಲೇ ದೂರು ದಾಖಲಾಗಿದೆ. ತಮಿಳುನಾಡು ಸುನ್ನತ್ ಜಮಾತ್, ಇದೀಗ ದಳಪತಿ ವಿಜಯ್ ವಿರುದ್ಧ ದೂರು ದಾಖಲು ಮಾಡಿದ್ದು, ವಿಜಯ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಇಸ್ಲಾಂ ಧರ್ಮಕ್ಕೆ ಅವಮಾನ ಆಗಿದೆ ಎಂದು ಆರೋಪಿಸಿದ್ದಾರೆ. ಚೆನ್ನೈನ ಪೊಲೀಸ್ ಆಯುಕ್ತರಿಗೆ ವಿಜಯ್ ವಿರುದ್ಧ ದೂರು ನೀಡಲಾಗಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸಿ ವಿಜಯ್ ವಿರುದ್ಧ ದೂರು ದಾಖಲಿಸುವಂತೆ ಮನವಿ ಮಾಡಲಾಗಿದೆ.
ವಿಜಯ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಇಸ್ಲಾಂ ಧರ್ಮಕ್ಕೆ ಹಾಗೂ ಮುಸಲ್ಮಾನರಿಗೆ ಅವಮಾನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಿಜಯ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಕುಡುಕರು ಮತ್ತು ರೌಡಿಗಳು ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ. ‘ವಿಜಯ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಕುಟುಕರು, ರೌಡಿಗಳು ಭಾಗವಹಿಸಿದ್ದಿದ್ದು ನಮ್ಮ ಗಮನಕ್ಕೆ ಬಂದಿದೆ. ಉಪವಾಸ ಮಾಡದ, ರಂಜಾನ್ನ ಬಗ್ಗೆ ಗೌರವ ಇಲ್ಲದವರು ಭಾಗವಹಿಸುವಿಕೆಯಿಂದ ಮುಸ್ಲೀಂ ಸಮುದಾಯಕ್ಕೆ ಅವಮಾನ ಆಗಿದೆ. ಅಲ್ಲದೆ ಇಫ್ತಾರ್ ಕೂಟದ ಆಯೋಜನೆ ಸಹ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿತ್ತು, ವಿಜಯ್ರ ಭದ್ರತೆಯವರು ಅಲ್ಲಿ ಸೇರಿದ್ದವರನ್ನು ಕೆಟ್ಟದಾಗಿ ನಡೆಸಿಕೊಂಡರು, ಜನರನ್ನು ಹಸುಗಳಂತೆ ಎಳೆದು ಬಿಸಾಡುತ್ತಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೆಲ ದಿನಗಳ ಹಿಂದೆ ಚೆನ್ನೈನ ವೈಎಂಸಿಎ ಗ್ರೌಂಡ್ಸ್ನಲ್ಲಿ ನಟ ವಿಜಯ್ ಇಫ್ತಾರ್ ಕೂಟ ಆಯೋಜನೆ ಮಾಡಿದ್ದರು.