ವಿಜಯಸಾಕ್ಷಿ ಸುದ್ದಿ, ಗದಗ : ಮಾಜಿ ಶಾಸಕ ಸಿ.ಎಸ್. ಮುತ್ತಿನಪೆಂಡಿಮಠ ಅವರ ರಾಜಕೀಯ ಜೀವನ ನಂತರದ ಒಡನಾಟ-ಬಾಂಧವ್ಯ ಅನ್ಯೋನ್ಯವಾಗಿತ್ತು. ಅವರೊಂದಿಗೆ ಡಿ.ಆರ್. ಪಾಟೀಲ ಒಡನಾಟ ಸ್ನೇಹ-ಸಂಬಂಧ ಉತ್ತಮವಾಗಿತ್ತು. ಅವರ ತತ್ವ-ಸಿದ್ಧಾಂತಗಳು ಉದಾತ್ತವಾಗಿದ್ದವು. ರಾಜಕಾರಣದಲ್ಲಿ ಸಕ್ರಿಯವಾಗಿ ಸ್ವಲ್ಪದಿನ ಇದ್ದರೂ ಸಹ ಜನಬಲ ಗಳಿಸಿಕೊಂಡಿದ್ದರು. ಅವರದ್ದು ಸ್ನೇಹಪರ ಬದುಕಾಗಿತ್ತು. ಅವರ ಸಂಸ್ಕೃತಿ, ಮೇಲುಸ್ಥರದ ವ್ಯಕ್ತಿತ್ವ ಎಲ್ಲರನ್ನೂ ಸೆಳೆಯುತ್ತಿತ್ತು ಎಂದು ಕಾನೂನು, ನ್ಯಾಯ ಮಾನನ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ನುಡಿದರು.
ಸಿ.ಎಸ್. ಮುತ್ತಿನಪೆಂಡಿಮಠ ಪ್ರತಿಷ್ಠಾನ, ಗದಗ-ಬೇಟಗೇರಿ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಗಜ್ಯೋತಿ ಬಸವೇಶ್ವರರ ಮೂರ್ತಿಗೆ ತೆರಳುವ ಮುಖ್ಯದ್ವಾರದ ರಸ್ತೆಗೆ ಮಾಜಿ ಶಾಸಕ ಸಿ.ಎಸ್. ಮುತ್ತಿನಪೆಂಡಿಮಠ ಅವರ ಹೆಸರನ್ನು ನಾಮಕರಣ ನೆರವೇರಿಸಿ ಸಚಿವರು ಮಾತನಾಡಿದರು.
ಪ್ರತಿಷ್ಠಾನದ ಅಧ್ಯಕ್ಷ ವಸಂತ ಮೇಟಿ ಹೆಳೀದಂತೆ ಅವರ ಪುತ್ಥಳಿ ಸ್ಥಾಪನೆ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು. ಈ ರಸ್ತೆಗೆ ಅವರ ಹೆಸರು ಅಂತ್ಯತ ಸಮಂಜಸವಾಗಿದೆ. ಇದು ಪ್ರವಾಸಿ ತಾಣವಾಗಿ ಎಲ್ಲರನ್ನು ಸೇಳೆಯಲಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಸಿ.ಎಸ್. ಮುತ್ತಿನಪೆಂಡಿಮಠ ಅವರು ವಕೀಲರಾಗಿ ಜನಸೇವೆ ಮಾಡಿದ್ದಾರೆ. ನಾನು ಶಾಸಕನಾಗಲು ಪ್ರಮುಖ ಕಾರಣ ಸಿ.ಎಸ್. ಮುತ್ತಿನಪೆಂಡಿಮಠ ಎಂದರೆ ತಪ್ಪಾಗದು. ಗದಗ ಜಿಲ್ಲೆಯ ನೀರಿನ ಬವಣೆ ತೀರಿಸಿದ ಭಗೀರಥ ಸಚಿವ ಎಚ್.ಕೆ. ಪಾಟೀಲ ಎಂದು ಹೇಳಿದರು.
ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಜನಸೇವೆ, ನ್ಯಾಯವಾದಿಗಳಾಗಿ ಮಾಡಿದ ಅವರ ಸೇವೆ ಅಗಾಧವಾದದು. ನಾಡನ್ನು ಸಮೃದ್ಧವಾಗಿ ಕಟ್ಟಲು ಮುತ್ತಿನಪೆಂಡಿಮಠ ಅಂತವರು ಮತ್ತೆ ಮತ್ತೆ ಹುಟ್ಟಿ ಬರಬೇಕು. ಸಾರ್ವಜನಿಕರ ಸೇವೆಯಲ್ಲಿ ಕೆಲಸ ಮಾಡುವಾಗ ಅನೇಕ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಆದರೆ, ಸಿ.ಎಸ್. ಮುತ್ತಿನಪೆಂಡಿಮಠ ಸಮಾಜದ ಏಳ್ಗೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿಯಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸದಸ್ಯರಾದ ಎಲ್.ಡಿ. ಚಂದಾವರಿ, ಪದ್ಮಾ ಕಟಗಿ, ಅನಿಲ ಅಬ್ಬಿಗೇರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಐ. ಹಿರೆಮನಿ ಪಾಟೀಲ, ಡಾ. ಎಂ.ಬಿ. ಪಾಟೀಲ, ವಿಶ್ವನಾಥ ಪಾಟೀಲ, ಪ್ರತಿಷ್ಠಾನದ ಅಧ್ಯಕ್ಷ ವಸಂತ ಮೇಟಿ ಹಾಜರಿದ್ದರು.
ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ರಸ್ತೆಗೆ ಸಿ.ಎಸ್. ಮುತ್ತಿನಪೆಂಡಿಮಠ ಹೆಸರಿಡಲು ನಗರಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿ ಅಂಗಿಕರಿಸಲಾಗಿದೆ. ಅವರು ಎರಡು ಬಾರಿ ಶಾಸಕರಾಗಿ ಉತ್ತಮ ಕಾರ್ಯಗಳ ಮೂಲಕ ಗಮನ ಸೆಳೆದಿದ್ದಾರೆ. ಉತ್ತಮ ಕಾರ್ಯಗಳ ಮೂಲಕ ಜನಮಾನಸದಲ್ಲಿ ಇಂದಿಗೂ ಅವರು ಅಜರಾಮರರಾಗಿದ್ದಾರೆ ಎಂದರು.