ಕಲಬುರ್ಗಿ: ಅಪ್ಪ ಅವರು, ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಎಲ್ಲಾ ಜನರ ಜೊತೆ ಬೆರೆತು ಜನಸೇವೆ ಮಾಡಿದ ಧೀಮಂತ ಶರಣರು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಕಲಬುರ್ಗಿಯಲ್ಲಿ ಶುಕ್ರವಾರ ಸಕಲ ಸರ್ಕಾರಿ ಗೌರವದೊಂದಿಗೆ ಶರಣಬಸವಪ್ಪ ಅಪ್ಪ ಅವರ ಅಂತಿಮ ಸಂಸ್ಕಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ನಾನು ಈ ಹಿಂದೆ ಕಲಬುರ್ಗಿಗೆ ಬಂದಾಗ ಅಪ್ಪ ಅವರನ್ನು ಭೇಟಿ ಮಾಡಿದ್ದೆ. ಮಲ್ಲಿಕಾರ್ಜುನ ಖರ್ಗೆ ಅವರು ನನಗೆ ಈ ವಿಚಾರ ತಿಳಿಸಿದರು. ಅವರು ಈ ಸಂದರ್ಭದಲ್ಲಿ ತೆರಳಲು ಆಗುತ್ತಿಲ್ಲ ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳು ನಮ್ಮ ಜೊತೆ ಚರ್ಚೆ ಮಾಡಿದ್ದಾರೆ.
ನಮ್ಮ ಇಡೀ ಸರ್ಕಾರ ಅವರು, ಅವರ ಕುಟುಂಬ ಹಾಗೂ ಅವರ ಭಕ್ತಾದಿಗಳ ಜೊತೆ ನಿಲ್ಲಲಿದೆ. ಅಪ್ಪಾ ಅವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿಸಬೇಕು ಎಂದು ನಾನಿಲ್ಲಿಗೆ ಬಂದಿದ್ದೇನೆ. ರಾಷ್ಟ್ರಧ್ವಜವನ್ನು ಹಾರಿಸುವ ದಿನ ಅಪ್ಪ ಅವರ ಕುಟುಂಬಕ್ಕೆ ಅರ್ಪಿಸಿದ್ದೇವೆ. ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ” ಎಂದು ತಿಳಿಸಿದರು.
“ಹುಟ್ಟು ಸಾವಿನ ಮಧ್ಯದಲ್ಲಿ ಅವರ ಅನೇಕ ಸಾಧನೆಗಳಿಗೆ ಸರ್ಕಾರ ಗೌರವ ಸಲ್ಲಿಸುವ ಕೆಲಸ ಮಾಡಿದೆ. ಅವರ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು. ಈ ಐತಿಹಾಸಿಕ ಮಠವನ್ನು ಕಾಪಾಡಿಕೊಂಡು ಹೋಗಬೇಕು. ನೀವು ನಿಮ್ಮ ಮನೆಗಳನ್ನು ಯಾವ ರೀತಿ ಕಾಪಾಡುತ್ತೀರೋ, ಅದೇ ರೀತಿ ಮಠಗಳನ್ನು ಕಾಪಾಡಿಕೊಳ್ಳಬೇಕು ಎಂದು ಎಲ್ಲಾ ಭಕ್ತಾದಿಗಳಲ್ಲಿ ಮನವಿ ಮಾಡುತ್ತೇನೆ” ಎಂದರು.