ನಬಾರ್ಡ್ ಸೌಲಭ್ಯಗಳು ಅರ್ಹರಿಗೆ ತಲುಪುತ್ತಿವೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೆ.ಸಿ.ಸಿ. ಬ್ಯಾಂಕ್ ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ರಾಜ್ಯ ಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮವನ್ನು ದಿ. ಚೇಂಬರ್ ಆಫ್ ಕಾಮರ್ಸ್ನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

Advertisement

ಬೆಳಗಾವಿ ಪ್ರಾಂತ್ಯದ ಸಹಕಾರ ಸಂಘಗಳ ಸಂಯುಕ್ತ ನಿಬಂಧಕರಾದ ಡಾ.ಸುರೇಶಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಸಿ ಮಾತನಾಡುತ್ತ, ಜ್ಞಾನದ ಅರಿವು ಮೂಡಿಸುವ ಕೆಲಸವನ್ನು ಇಂತಹ ಮಹಾಮಂಡಳ ಕಾರ್ಯಕ್ರಮಗಳು ನೆರವೇರಿಸುತ್ತಿವೆ. ಗದಗನಲ್ಲಿ 165 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ನಬಾರ್ಡ್ನಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಅರ್ಹ ರೈತರಿಗೆ ತಲುಪಿಸುತ್ತಿರುವುದು ಸಂತಸದ ಸಂಗತಿ ಎಂದರು.

ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದ ಅಧ್ಯಕ್ಷರಾದ ಜಿ.ಪಿ. ಪಾಟೀಲ ಮಾತನಾಡುತ್ತ, ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕೃಷಿ ವಲಯ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತಿದೆ. ಇನ್ನು ಕೃಷಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಜೀವನಾಡಿಗಳಾಗಿವೆ. ಈ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮೀಣ ಮಟ್ಟದಲ್ಲಿ ಸದಸ್ಯರಿಗೆ ಬ್ಯಾಂಕಿಂಗ್ ಸೇರಿದಂತೆ ಬಹುವಿಧದ ಸೇವೆಯನ್ನು ನಿಡುವುದಲ್ಲದೇ ಕೃಷಿ ಸಂಬಂಧಿತ ಸಾಲಗಳನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿವೆ ಎಂದರು.

ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಯುನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ, ಉಪಾಧ್ಯಕ್ಷ ವಾಯ್.ಎಫ್. ಪಾಟೀಲ, ಧಾರವಾಡ ಕೆ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಂ.ಎಫ್. ಕಲಗುಡಿ, ಜಿ.ವ್ಹಿ. ಪಾಟೀಲ, ಕೆ.ಸಿ.ಸಿ. ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನಿತಾ ಸಿದ್ರಾಮ, ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕ ಅರವಿಂದ ಎನ್.ನಾಗಜ್ಜನವರ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಪುಷ್ಪಾ ಕೆ.ಕಡಿವಾಳ, ಕೆ.ಸಿ.ಸಿ. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಎಸ್.ವ್ಹಿ. ಹೂಗಾರ, ರೋಣ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಪ್ರಶಾಂತ ಮುಧೋಳ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವ್ಯಾಪಾರ ಅಭಿವೃದ್ಧಿ ಯೋಜನೆ ಕುರಿತು ಪ್ರೊ. ಸಿದ್ದು ಯಾಪಲಪರವಿ, ಕೃಷಿಯಲ್ಲಿ ನ್ಯಾನೋ ಯೂರಿಯಾ ಹಾಗೂ ಡಿ.ಎ.ಪಿ ಇವುಗಳ ಬಳಕೆ ಕುರಿತು ಗಣೇಶ ಎಸ್.ಎನ್, ಸಹಕಾರಿ ಕಾಯಿದೆ ಮುಖ್ಯಾಂಶಗಳು ಹಾಗೂ ಪ್ಯಾಕ್ಸ್ಗಳ ಬಲವರ್ಧನೆ ಕುರಿತು ಎಸ್.ಜಿ. ಸುಣಗಾರ ಉಪನ್ಯಾಸ ನೀಡಿದರು.

ಶ್ರೀದೇವಿ ರಾಮಣ್ಣನವರ ಪ್ರಾರ್ಥಿಸಿದರು. ಚಂದ್ರಶೇಖರ ಎಸ್.ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು. ರಶೀದಾಬಾನು ಸಿ.ಯಲಿಗಾರ ವಂದಿಸಿದರು.

ಕೆ.ಸಿ.ಸಿ ಬ್ಯಾಂಕ್ ಧಾರವಾಡದ ಅಧ್ಯಕ್ಷ ಶಿವಕುಮಾರಗೌಡ ಎಸ್.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ದೇಶದಾದ್ಯಂತ ಸುಮಾರು 65000 ಕೃಷಿ ಪತ್ತಿನ ಸಹಕಾರ ಸಂಘಗಳು ಕ್ರಿಯಾಶೀಲ ಸೇವೆ ಸಲ್ಲಿಸುತ್ತಿವೆ. 2012ರಲ್ಲಿ ಕೇಂದ್ರ ಸರ್ಕಾರ ಸಹಕಾರ ಸಚಿವಾಲಯವನ್ನು ಆರಂಭಿಸಿದ ಮೇಲೆ ಸಹಕಾರ ಕ್ಷೇತ್ರದ ಬಲವರ್ಧನೆಗೆ ವಲಯವಾರು ತರಬೇತಿ ನೀಡುವ ಮಾದರಿಗಳನ್ನು ಗುರುತಿಸಿ ಅವುಗಳ ಮೂಲಕ ಸಹಕಾರ ಕ್ಷೇತ್ರವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬೆಳೆಸಲು ಅಗತ್ಯವಾದ ಬೆಂಬಲ ಹಾಗೂ ಪ್ರೋತ್ಸಾಹವನ್ನು ನೀಡುತ್ತಿದೆ ಎಂದರು.


Spread the love

LEAVE A REPLY

Please enter your comment!
Please enter your name here