ಬೆಂಗಳೂರು: ಪ್ರಚಾರಕೋಸ್ಕರ ನಾಚಪ್ಪ ಪತ್ರ ಬರೆದಿರಬಹುದು, ಅದಕ್ಕೆ ಜಾಸ್ತಿ ಮನ್ನಣೆ ಕೊಡೋ ಅವಶ್ಯಕತೆಯಿಲ್ಲ ಎಂದು ವಿಧಾನಸೌಧದಲ್ಲಿ ಶಾಸಕ ರವಿ ಗಣಿಗ ಹೇಳಿಕೆ ನೀಡಿದ್ದಾರೆ. ರಶ್ಮಿಕಾ ಮಂದಣ್ಣಗೆ ಭದ್ರತೆ ಬೇಕು ಅಂತ ಕೊಡವ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಈ ವಿಚಾರವಾಗಿ ರವಿ ಗಣಿಗ ಮತ್ತೆ ಕಿಡಿಕಾರಿದ್ದಾರೆ.
ಯಾರಾದರೂ ಜವಾಬ್ದಾರಿಯುತ ವ್ಯಕ್ತಿ ಮಾತನಾಡಿದರೆ ಮನ್ನಣೆ ಕೊಡಬಹುದಿತ್ತು. ಕೊಡಗಿನಲ್ಲಿ ನಾಚಪ್ಪ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಅವರ ಬಗ್ಗೆ ಜಾಸ್ತಿ ಪ್ರಾಮುಖ್ಯತೆ ಕೊಡೋದು ತಪ್ಪು. ಆವತ್ತು ಆಡಿದ ಮಾತಿಗೆ ಈಗಲೂ ಬದ್ಧನಿದ್ದೇನೆ. ನಮ್ಮ ಜಲ, ನಮ್ಮ ಭಾಷೆ, ನಮ್ಮ ರಾಜ್ಯವೇ ಮುಖ್ಯ. ನಮ್ಮ ವೈಯಕ್ತಿಕ ಹಿತಾಸ್ತಕಿ ಅಲ್ಲ.
ಕಳೆದ ಬಾರಿ ಚಲನಚಿತ್ರೋತ್ಸವಕ್ಕೆ ಕರೆದಾಗ ಅವರು ನಿರಾಕರಿಸಿದ್ದು, ಹಲವಾರು ವೇದಿಕೆಯಲ್ಲಿ ಕನ್ನಡ ಮತ್ತು ಕರ್ನಾಟಕವನ್ನು ಅವಮಾನಕಾರಿಯಾಗಿ ರಶ್ಮಿಕಾ ಮಾತನಾಡಿರೋದು ಇಂದಿಗೂ ಖಂಡಿಸುತ್ತೇನೆ. ಇವತ್ತಿಗೂ ಕರ್ನಾಟಕದ ಪರ ನಾನಿದ್ದೇನೆ ಅಂತ ಹೇಳಲಿ, ಆ ಬಗ್ಗೆ ನಾನು ತುಟಿಕ್ ಪುಟಿಕ್ ಎನ್ನಲ್ಲ ಎಂದು ರವಿ ಗಣಿಗ ಹೇಳಿದ್ದಾರೆ.