ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಾಡಿನ ಪ್ರಾಚೀನ ದೇವಸ್ಥಾನಗಳ ಜೀರ್ಣೋದ್ಧಾರದೊಂದಿಗೆ ಅಲ್ಲಿ ಸಂಗೀತ, ಸಾಹಿತ್ಯ, ಕಲೆ ಹೀಗೆ ಸಾಂಸ್ಕೃತಿಕ ಶ್ರೀಮಂತಿಕೆಯ ಮರು-ವೈಭವೀಕರಣಕ್ಕೆ ಇನ್ಫೋಸಿಸ್ನ ಕೊಡುಗೆ ಅಪಾರ ಎಂದು ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮೀ ಕೆ.ರಾವ್ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಮತ್ತು ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ನ ಸಹಯೋಗದಲ್ಲಿ ನಡೆಯುತ್ತಿರುವ 8ನೇ ವರ್ಷದ ಪುಲಿಗೆರೆ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ನಾಡಿನ ಪ್ರಾಚೀನ ದೇವಸ್ಥಾನ, ಶಿಲ್ಪಕಲೆ, ಸಂಗೀತ, ಸಾಹಿತ್ಯ, ಇತಿಹಾಸ ಪರಂಪರೆ ಉಳಿಸಿ ಬೆಳೆಸುವುದು ಇಂದಿನ ಅಗತ್ಯ ಮತ್ತು ಎಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಶೀಥಿಲಾವಸ್ಥೆಯಲ್ಲಿದ್ದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾವನ್ನು ಇನ್ಫೋಸಿಸ್ ಪ್ರತಿಷ್ಠಾನದ ಒಡತಿ, ರಾಜ್ಯಸಭಾ ಸದಸ್ಯೆ ಡಾ. ಸುಧಾನಾರಾಯಣ ಮೂರ್ತಿ ತಮ್ಮದೇ ಪ್ರತಿಷ್ಠಾನದಿಂದ ಜೀರ್ಣೋದ್ಧಾರಗೊಳಿಸಿದ್ದಾರೆ. ಪ್ರತಿವರ್ಷ ಲಕ್ಷಾಂತರ ರೂ ಖುರ್ಚು ಮಾಡಿ `ಪುಲಿಗೆರೆ ಉತ್ಸವ’ ಆಯೋಜಿಸುತ್ತಿದ್ದಾರೆ. ಕಲಾರಾಧನೆಯ ಈ ನೆಲದಲ್ಲಿ ಕಲಾವಿದರಿಗೆ ಇಲ್ಲಿ ಸಿಗುವ ಪ್ರೋತ್ಸಾಹ, ಗೌರವದಿಂದಲೇ 8 ವರ್ಷಗಳಿಂದ ಪುಲಿಗೆರೆ ಉತ್ಸವದ ಸಂಭ್ರಮ ಹೆಚ್ಚುತ್ತಿದೆ ಎಂದರು.
ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಮಾತನಾಡಿ, ಪುಲಿಗೆರೆಯ ದೇವಸ್ಥಾನದಲ್ಲಿ ನಿತ್ಯ ಪೂಜೆ, ಘಂಟೆ-ಜಾಗಟೆಗಳ ವಾದ್ಯಮೇಳದ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ವೈಭವ ಮೇಳೈಸಬೇಕು. ಆ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯಗಳು, ಕಲೆ, ಸಂಗೀತ ಉಳಿಯಬೇಕು ಎಂಬ ಇನ್ಪೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿಯವರ ಉದ್ದೇಶ, ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಶ್ರೀ ಸೊಮೇಶ್ವರ ಭಕ್ತರ ಸೇವಾ ಟ್ರಸ್ಟ್ನ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಇನ್ಫೋಸಿಸ್ ಪೌಂಢೇಶನ್ನ ಕಾರ್ಯಕ್ರಮ ವ್ಯವಸ್ಥಾಪಕ ಮಹೇಶಕುಮಾರ, ನಿರ್ದೇಶಕಿ ಕ್ಯಾ.ಶಾಂತಿ, ಸಂಯೋಜಕ ಪ್ರಲ್ಹಾದ್, ವ್ಹಿ.ಎಲ್. ಪೂಜಾರ, ಚನ್ನಪ್ಪ ಜಗಲಿ, ಪೂರ್ಣಾಜಿ ಖರಾಟೆ, ಆನಂದ ಮೆಕ್ಕಿ, ಸುರೇಶ ರಾಚನಾಯ್ಕರ, ಸುಭಾಸ ಒದುನವರ, ಗೀತಾದೇವಿ ಮಾನ್ವಿ, ಮಾಲಾದೇವಿ ದಂದರಗಿ, ಈಶ್ವರ ಮೇಡ್ಲೇರಿ, ಬಸವರಾಜ ಬಾಳೇಶ್ವರಮಠ, ಬಸವೇಶ ಮಹಾಂತಶೆಟ್ಟರ, ಸಿದ್ದನಗೌಡ ಬಳ್ಳೊಳ್ಳಿ, ಸಿ.ಜಿ. ಹಿರೇಮಠ, ಗುರಣ್ಣ ಪಾಟೀಲಕುಲಕರ್ಣಿ, ಶಿವಯೋಗಿ ಅಂಕಲಕೋಟಿ, ಅರ್ಚಕರಾದ ಸೋಮನಾಥ ಪೂಜಾರ ಸೇರಿದಂತೆ ಅನೇಕರು ಹಾಜರಿದ್ದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಇನ್ಫೋಸಿಸ್ ಸಂಸ್ಥೆ ತಾಂತ್ರಿಕ ಕ್ಷೇತ್ರದಲ್ಲಿ ವಿಶ್ವಮಾನ್ಯತೆ ಹೊಂದಿದ್ದರೂ ಸಹ ಈ ಸಂಸ್ಥೆಯ ಒಡತಿ ಡಾ. ಸುಧಾನಾರಾಯಣ ಮೂರ್ತಿ ಅವರ ಸಾಮಾಜಿಕ, ಸಾಂಸ್ಕೃತಿಕ ಕಳಕಳಿ ಪ್ರಶಂಸನೀಯ. ದೇವಸ್ಥಾನದ ಹಿರಿಮೆ-ಗರಿಮೆ ಹೆಚ್ಚಿಸುವ ಮತ್ತು ಸಾಂಸ್ಕೃತಿಕ ವೈಭವ ಶ್ರೀಮಂತಗೊಳಿಸುವ ಪುಲಿಗೆರೆ ಉತ್ಸವ ನಿರಂತರವಾಗಿ ನಡೆಯಲು ಈ ಭಾಗದ ಜನರ, ಭಕ್ತರ ಸಹಕಾರ-ಪಾಲ್ಗೊಳ್ಳುವಿಕೆ ಅಗತ್ಯ ಎಂದರು.