ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನದ ವಾರ್ಷಿಕೋತ್ಸವವನ್ನು ಇಲ್ಲಿನ ಆರ್ಯವೈಶ್ಯ ಸಮಾಜದವರು ಶೃದ್ಧಾಭಕ್ತಿಯಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ರಾಮಣ್ಣ ನವಲಿ, ಸಮಾಜದ ಎಲ್ಲ ಬಂಧುಗಳ ಸಹಕಾರದಿಂದ ನರೇಗಲ್ಲ ಪಟ್ಟಣದಲ್ಲಿ ಒಂದು ವರ್ಷದ ಕೆಳಗೆ ನಾವು ಈ ಭವ್ಯ ದೇವಸ್ಥಾನವನ್ನು ನಿರ್ಮಿಸಿದೆವು. ಈ ಕಾರ್ಯದಲ್ಲಿ ಕೇವಲ ನಮ್ಮೂರಿನ ಸಮಾಜ ಬಾಂಧವರಲ್ಲದೆ, ಪರ ಊರಿನ ಎಲ್ಲ ಬಾಂಧವರು ಮತ್ತು ನಮ್ಮೂರಿನ ಇತರೆ ಸಮಾಜದ ಎಲ್ಲ ಬಂಧುಗಳು ಸಾಕಷ್ಟು ಸಹಕಾರ ನೀಡಿದರು ಎಂದರು.
ಉಪಾಧ್ಯಕ್ಷ ಚಂದ್ರಹಾಸ ಇಲ್ಲೂರ ಮಾತನಾಡಿ, ಈ ಒಂದು ವರ್ಷದ ಅವಧಿಯಲ್ಲಿ ಈ ದೇವಸ್ಥಾನದಲ್ಲಿ ಅನೇಕ ಧಾರ್ಮಿಕ ಕಾರ್ಯಗಳು ನಡೆದಿವೆ. ನಮ್ಮ ಸಮಾಜದ ಸುಮಂಗಲೆಯರು ಎಲ್ಲ ಹಬ್ಬ ಹರಿದಿನಗಳಲ್ಲಿ ಇಲ್ಲಿ ಸೇರಿ ಉಡಿ ತುಂಬುವ, ಲಕ್ಷ್ಮೀ ಸೋಬಾನೆ, ಕುಂಕುಮಾರ್ಚನೆ ಇತ್ಯಾದಿ ಕಾರ್ಯಕ್ರಮಗಳನ್ನು ಅತ್ಯಂತ ಶೃದ್ಧಾಭಕ್ತಿಗಳಿಂದ ಮಾಡುತ್ತ ಬಂದಿದ್ದಾರೆ. ಈ ಕಾರ್ಯಗಳು ಹೀಗೆಯೇ ಮುನ್ನಡೆಯಲಿ ಎಂದು ಆಶಿಸಿದರು.
ವೇ. ಮೂ. ವಿಶ್ವನಾಥಭಟ್ಟ ಗ್ರಾಮಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು. ಶ್ರೀ ಕನ್ನಿಕಾ ಪರಮೇಶ್ವರಿಗೆ ಪಾಲಕೀ ಸೇವೆ ಜರುಗಿತು. ಅಶೋಕ ನವಲಿ, ರಾಜೇಂದ್ರ ದೇವರಂಗಡಿ, ಚಂದ್ರಹಾಸ ಇಂಗಳಳ್ಳಿ, ವೆಂಕಟೇಶ ಕಣವಿಹಳ್ಳಿ, ಈರಣ್ಣ ಇಲ್ಲೂರ, ಮುತ್ತಣ್ಣ ದೇವರಂಗಡಿ, ಶರಣಪ್ಪ ಬಿಜಾಪೂರ, ಬೆಟದೂರ ಸಹೋದರರು, ಮನೋಹರ ಗುಡಿಸಾಗರ, ನಾಗೇಶ ಗುಡಿಸಾಗರ, ಮಂಜುನಾಥ ನವಲಿ, ಮಹೇಶ ನವಲಿ ಹಾಗೂ ಸಮಾಜದ ಎಲ್ಲ ಸುಮಂಗಲೆಯರು ಪಾಲ್ಗೊಂಡಿದ್ದರು.