ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ನಾಗಾವಿ ಗ್ರಾಮದ ಸೋಮೇಶ ಹಿರೇಮಠ ಪ್ರತಿಷ್ಠಾನ ಹಾಗೂ ನಾಗಾವಿ ನಾನಾ ಯೂಟ್ಯೂಬ್ ವತಿಯಿಂದ ನಿರ್ಮಾಣವಾಗಲಿರುವ ಸುಕ್ಷೇತ್ರ ನಾಗಾವಿ ಯಲ್ಲಮ್ಮ ದೇವಿಯ ಭಕ್ತಿಗೀತೆಗಳ ವಿಡಿಯೋ ಚಿತ್ರೀಕರಣಕ್ಕೆ ನಾಗಾವಿ ಗ್ರಾಮದ ನಿರ್ಮಾಣ ಹಂತದಲ್ಲಿರುವ ನಮೋ ಯೋಗ ಸಮುದಾಯ ಭವನದಲ್ಲಿ ಚಾಲನೆ ನೀಡಲಾಯಿತು.
ನಾಗಾವಿ ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನದ ಪ್ರಮುಖ ಸದಸ್ಯರಾದ ಕೆ.ಬಿ. ಮರಡ್ಡಿ ಅವರ ಅಧ್ಯಕ್ಷತೆ ಹಾಗೂ ವೇದಮೂರ್ತಿ ಬಸನಗೌಡ್ರು ಪಾಟೀಲರ ಸಮ್ಮುಖದಲ್ಲಿ ನಾಗಾವಿ ಗ್ರಾ.ಪಂ ಮಾಜಿ ಅಧ್ಯಕ್ಷ ಜಗದೀಶ ಚಿಂಚಲಿ, ಕೋಡಿಹಳ್ಳಿ ಚಂದ್ರಶೇಖರ ಬಣದ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಶಂಕರಗೌಡ ಜಾಯನಗೌಡ್ರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಂಕರಗೌಡ ಜಾಯನಗೌಡ್ರು ಮಾತನಾಡಿ, 10ನೇ ಶತಮಾನಕ್ಕಿಂತಲೂ ಪುರಾತನ ಇತಿಹಾಸ ಹೊಂದಿರುವ ನಾಗಾವಿ ಯಲ್ಲಮ್ಮ ದೇವಿ ದೇವಸ್ಥಾನ ಜಿಲ್ಲೆ ರಾಜ್ಯ ಸೇರಿದಂತೆ ದೇಶಾದ್ಯಂತ ಅಪಾರ ಭಕ್ತ ಸಮೂಹ ಹೊಂದಿದೆ. ಯಲ್ಲಮ್ಮ ದೇವಿ ಪವಾಡಗಳ ಅಧಿದೇವತೆಯಾಗಿದ್ದಾಳೆ. ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡ, ಬಾದಾಮಿ ತಾಲೂಕಿನ ಬನಶಂಕರಿ ಜಾತ್ರಾ ಮಹೋತ್ಸವ ದಿನದಂದೇ ಬನದಹುಣ್ಣಿಮೆ ದಿನ ನಾಗಾವಿ ಯಲ್ಲಮ್ಮ ದೇವಿ ಜಾತ್ರೆ ನೆರವೇರುತ್ತಿರುವುದು ವಿಶೇಷವಾಗಿದೆ. 1952ರಿಂದ ಪ್ರಾರಂಭಗೊಂಡ ಯಲ್ಲಮ್ಮ ದೇವಿ ಜಾತ್ರೆ 73ನೇ ವರ್ಷದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಜಾತ್ರಾ ಮಹೋತ್ಸವದ ಸವಿನೆನಪಿಗಾಗಿ ನಾಗಾವಿ ನಾನಾ ಯೂಟ್ಯೂಬ್ನವರು ನಾಗಾವಿ ಯಲ್ಲಮ್ಮ ದೇವಿ ಭಕ್ತಿಗೀತೆಗಳನ್ನು ನಾಡ ಜನತೆಗೆ ಅರ್ಪಿಸುತ್ತಿರುವುದು ಮೆಚ್ಚುವ ಕಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮೈಲಾರಪ್ಪ ತಾಮ್ರಗುಂಡಿ, ಬಸವರಾಜ ವಡ್ಡರ, ಗ್ರಾಮದ ಮುಖಂಡರಾದ ಷಣ್ಮುಖಗೌಡ ಪಾಟೀಲ, ಈರಪ್ಪ ಜಂತ್ಲಿ, ಶಾಂತಗೌಡ ಪಾಟೀಲ, ವಿರುಪಾಕ್ಷಪ್ಪ ಬಳರಾದ, ಕಿರಣಗೌಡ ಪಾಟೀಲ, ಚೆನ್ನಯ್ಯ ಹಿರೇಮಠ, ಗುರುಸಿದ್ದಪ್ಪ ಮಡಿವಾಳರ, ಶಾರಮ್ಮ ಪಾಟೀಲ, ವಿಶಾಲಾಕ್ಷಿ ಪಾಟೀಲ, ಶಿವಲಿಂಗವ್ವ ಹಿರೇಮಠ, ನಿವೇದಿತಾ ಪಾಟೀಲ, ಉಪಸ್ಥಿತರಿದ್ದರು.
ಧೀರಜ ನಂದಿಕೊಲಮಠ ಸ್ವಾಗತಿಸಿದರು. ಕುಮಾರ ಶಿವನಗೌಡ ಪಾಟೀಲ ವಂದಿಸಿದರು.
ಬಸವಣ್ಣೆಯ್ಯ ಹಿರೇಮಠ ಮಾತನಾಡಿ, ನಾಗಾವಿ ಗ್ರಾಮದ ಸುಂದರವಾದ ಪರಿಸರದ ಗುಡ್ಡದ ಮೇಲೆ ನೆಲೆಯಾಗಿರುವ ಶ್ರೀರೇಣುಕಾ ಯಲ್ಲಮ್ಮ ದೇವಿಯ ಮೂರ್ತಿಯು ಸಾಧು-ಸತ್ಪುರುಷರು, ತಪೋ ಸಾಧಕ ಸಿದ್ದರಿಂದ ಸ್ಥಾಪನೆಗೊಂಡಿದೆ ಎಂದರು.


