ನಟಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ ಎಂಬ ಕಾರಣಕ್ಕೆ ಭೀಕರವಾಗಿ ಹತ್ಯೆಗೀಡಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕುಟುಂಬದಲ್ಲಿ ಇದೀಗ ನಗು ಮೂಡಿದೆ. ರೇಣುಕಾಸ್ವಾಮಿ ಹತ್ಯೆಯಾದ ಬಳಿಕ ಮೊದಲ ಬಾರಿಗೆ ಮನೆಯಲ್ಲಿ ಸಂಭ್ರಮದ ಕಾರ್ಯ ನಡೆದಿದೆ. ಮೃತ ರೇಣುಕಾಸ್ವಾಮಿ ಅವರ ಪುತ್ರನ ನಾಮಕರಣ ಮತ್ತು ತೊಟ್ಟಿಲು ಶಾಸ್ತ್ರ ನಡೆದಿದೆ.
ರೇಣುಕಾಸ್ವಾಮಿ ಪುತ್ರನಿಗೆ ಇಂದು ಚಿತ್ರದುರ್ಗದಲ್ಲಿರುವ ಅವರ ಮನೆಯಲ್ಲಿಯೇ ಸರಳವಾಗಿ ಕುಟುಂಬಸ್ಥರ ಮಧ್ಯೆ ನಾಮಕರಣ ಶಾಸ್ತ್ರ ಮತ್ತು ತೊಟ್ಟಿಲು ಶಾಸ್ತ್ರ ಮಾಡಿದ್ದಾರೆ. ಒಂದು ಕಡೆ ಮೊಮ್ಮಗನನ್ನು ನೋಡಿದ ಖುಷಿ, ಇನ್ನೊಂದು ಕಡೆ ಈ ಸಂತೋಷವನ್ನು ಕಣ್ತುಂಬಿಕೊಳ್ಳಲು ಮಗ ಇಲ್ಲ ಎನ್ನುವ ಕೊರಗು ರೇಣುಕಾಸ್ವಾಮಿ ತಂದೆ ತಾಯಿಯನ್ನು ಕಾಡುತ್ತಿದೆ ಮಗುವಿನ ಮುಖ ನೋಡಿ ಕಣ್ಣೀರು ಹಾಕಿದ್ದಾರೆ.
ಜಂಗಮ ಸಂಪ್ರದಾಯದಂತೆ ರೇಣುಕಾಸ್ವಾಮಿ ಮಗನಿಗೆ ನಾಮಕರಣ ಶಾಸ್ತ್ರ ಮಾಡಲಾಗಿದೆ. ಕುಟುಂಬ ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಮಗುವಿಗೆ ಶಶಿಧರ ಸ್ವಾಮಿ ಎಂದು ಹೆಸರಿಟ್ಟಿದ್ದಾರೆ. ಮೊಮ್ಮಗನ ನಾಮಕರಣದ ಶಾಸ್ತ್ರದ ನಂತರ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್ ಮಾತನಾಡಿ, “ಹರಿಹರದಿಂದ ನನ್ನ ಸೊಸೆ ಮತ್ತು ಮೊಮ್ಮಗ ಮನೆಗೆ ಬಂದಿದ್ದಾರೆ. ನಮ್ಮ ಸಂಪ್ರದಾಯದಂತೆ ಮಗುವಿಗೆ ನಾಮಕರಣ ಮಾಡಿದ್ದೇವೆ. ಗುರುಗಳ ಆಶೀರ್ವಾದದಿಂದ ಮೊಮ್ಮಗನಿಗೆ ʻಶಶಿಧರ’ ಎಂದು ಹೆಸರಿಟ್ಟಿದ್ದೇವೆ. ಮೊಮ್ಮಗನನ್ನು ನೋಡಿ ಮಗನೇ ಮನೆಗೆ ಬಂದಂತಿದೆ. ಆದರೂ ಹಳೆಯದನ್ನು ಮರೆಯೋದಕ್ಕೆ ಆಗುತ್ತಿಲ್ಲ” ಎಂದಿದ್ದಾರೆ.
“ನನ್ನ ಮೊಮ್ಮಗನ ನಾಮಕರಣ ಶಾಸ್ತ್ರವನ್ನ ನನ್ನ ಮಗಳು, ಮೊಮ್ಮಗನಿಗೆ ಸೋದರತ್ತೆ ಮಾಡಿದ್ದಾರೆ. ಶಾಸ್ತ್ರದಂತೆ ಅವರ ಸೋದರತ್ತೆ ನಾಮಕರಣ ಕಾರ್ಯವನ್ನು ಮಾಡಿದ್ದಾರೆ. ಅವನ ಭವಿಷ್ಯ ರೂಪಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಈ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ಸರ್ಕಾರಕ್ಕೆ ಮನವಿ ಮಾಡಿ ನನ್ನ ಸೊಸೆಗೆ ಸರ್ಕಾರಿ ಕೆಲಸ ಕೊಡಲಿ ಎಂದು ವಿನಂತಿ ಮಾಡಿದ್ದೇವೆ. ಸರ್ಕಾರ ದಯಮಾಡಿ ಅದನ್ನು ಪುರಸ್ಕರಿಸಬೇಕು ಎಂದು ನಾವು ಕೇಳಿಕೊಂಡಿದ್ದೀವಿ. ಮೊಮ್ಮಗನನ್ನು ನೋಡಿ ತುಂಬಾ ಸಂತೋಷವಾಯಿತು” ಎಂದು ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡರ ಹೇಳಿದ್ದಾರೆ.