ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಬಟ್ಟೂರ ಗ್ರಾಮದ ಬಸಪ್ಪ ಸಾವಿರಕುರಿ ಇವರ ಹೊಲದಲ್ಲಿ ಬುಧವಾರ ಗೋವಿನಜೋಳ ಬೆಳೆಯಲ್ಲಿ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪರಣೆ ಪ್ರಾತ್ಯಕ್ಷಿಕೆಯನ್ನು ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್. ಮಾತನಾಡಿ, ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಬಗ್ಗೆ ವರದಿಯಾಗಿದ್ದು, ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಗೋವಿನಜೋಳ, ಶೇಂಗಾ, ತೊಗರಿ ಹಾಗೂ ಇತರೆ ಬೆಳೆಗಳಿಗೆ ರೈತರು ಯೂರಿಯಾ ಗೊಬ್ಬರವನ್ನು ಮೇಲು ಗೊಬ್ಬರವಾಗಿ ಬಳಸುತ್ತಿದ್ದಾರೆ. ಇದರ ಬದಲಾಗಿ ಒಂದು ಎಕರೆ ಬೆಳೆಗೆ ಸುಮಾರು 500 ಮಿ.ಲೀ. ನ್ಯಾನೋ ಯೂರಿಯಾ ಬಳಸುವದರಿಂದ ಉತ್ತಮ ಫಲಿತಾಂಶದ ಜೊತೆಗೆ ಆರ್ಥಿಕವಾಗಿಯೂ ಉಳಿತಾಯವಾಗಲಿದೆ.
ಬಟ್ಟೂರು ಗ್ರಾಮದ ಸುಮಾರು 500ಕ್ಕೂ ಅಧಿಕ ಎಕರೆ ಭೂಮಿಯಲ್ಲಿ ನ್ಯಾನೋ ಯೂರಿಯಾ ಸಿಂಪರಣೆ ಮಾಡಲಾಗಿದ್ದು, ಎಲ್ಲೆಡೆ ಉತ್ತಮ ಫಲಿತಾಂಶ ಬಂದಿದೆ. ನ್ಯಾನೋ ಯೂರಿಯಾ ಗೊಬ್ಬರ ನುರಿತ ತಜ್ಞರು, ವಿಜ್ಞಾನಿಗಳ ಸಂಶೋಧನೆಯಿಂದ ತಯಾರಿಸಲ್ಪಟ್ಟಿದೆ. ಬೆಳೆಗಳಿಗೆ ಅತ್ಯಂತ ಉಪಯುಕ್ತವಾಗಿದೆ. ಅದರಲ್ಲೂ ಡ್ರೋನ್ ಮೂಲಕ ಯೂರಿಯಾ ಸಿಂಪರಣೆ ಹೆಚ್ಚು ಫಲದಾಯಕವಾಗುತ್ತದೆ. ರೈತರು ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸುವ ಮೂಲಕ ಕೃಷಿಯಲ್ಲಿ ಹೆಚ್ಚು ಇಳುವರಿ ಪಡೆಯುವ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಹೇಳಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣಪ್ಪ ಮನಗೂಳಿ ಮಾತನಾಡಿ, ಯೂರಿಯಾ ಸಸ್ಯಗಳಿಗೆ ಸಾರಜನಕವನ್ನು ಒದಗಿಸಲು ಬಳಸುವ ದ್ರವರೂಪದ ರಸಗೊಬ್ಬವಾಗಿದೆ. ಇದನ್ನು ನ್ಯಾನೋ ತಂತ್ರಜ್ಞಾನವನ್ನು ಆಧರಿಸಿ ಅಭಿವೃದ್ಧಿಪಡಿಸಲಾಗಿದೆ. ಸಾಂಪ್ರದಾಯಿಕ ಯೂರಿಯಾಕ್ಕೆ ಪರಿಸರ ಸ್ನೇಹಿ ಪರ್ಯಾಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಸಹಾಯಕ ಕೃಷಿ ಅಧಿಕಾರಿ ಪಿ.ಕೆ. ಹೊನ್ನಪ್ಪನವರ, ದೇವರಾಜ ಅಚಲಕರ, ಮಹೇಶ ನಂದೆಣ್ಣವರ, ಹರೀಶ ಭದ್ರಾಪೂರ, ಜಗದೀಶಗೌಡ ಪಾಟೀಲ, ರಾಜಣ್ಣ ಹೊಳಲಾಪೂರ, ಪರಸಪ್ಪ ಇಮ್ಮಡಿ, ಪಿಡಿಒ ಮಾದರ್, ಗ್ರಾಮದ ರೈತರು ಹಾಜರಿದ್ದರು.



