ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದಲ್ಲಿ ಜಾತಿ, ಮತ ಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವೆಂಬ ಸಮಾಜಕ ಸುಧಾರಕ ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟು ಹೋರಾಡಿದರು ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ರವಿವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಕೃತ ಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿದ್ದ ನಾರಾಯಣ ಗುರುಗಳು, ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡರು. ದೇಶ ಸೇವೆಯೇ ಈಶ ಸೇವೆಯೆಂದು ಅವರು ಬೋಧಿಸಿದ್ದಾರೆ ಎಂದು ಡಾ. ದುರಗೇಶ್ ಕೆ.ಆರ್ ವಿವರಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ಸಾಬ್ ಬಬರ್ಚಿ ಜಯಂತಿಗೆ ಚಾಲನೆ ನೀಡಿ ಮಾತನಾಡಿ, ಆರ್ಯ ಈಡಿಗ ಸಮುದಾಯದವರು ಮೊದಲು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು. ಆ ಮೂಲಕ ಸಮುದಾಯ ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದೆ ಬರಬೇಕು ಎಂದರು.
ಗದುಗಿನ ಪರಶುರಾಮ ಈಳಗೇರ ಉಪನ್ಯಾಸ ನೀಡುತ್ತಾ, ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ನಾವೆಂದೂ ಮರೆಯಬಾರದು. ಅವರ ಮಾರ್ಗದರ್ಶನವನ್ನು ಸ್ಪೂರ್ತಿಯಾಗಿಟ್ಟುಕೊಂಡು ಜೀವನದಲ್ಲಿ ಮುಂದೆ ಸಾಗೋಣ ಎಂದರು.
ಸಮಾಜದ ವಿರೋಧಿ ಕಾರ್ಯಗಳಿಗೆ ಮುಟ್ಟುಗೋಲು ಹಾಕಲು ಅವರು ತೆಗೆದುಕೊಂಡ ಕ್ರಮಗಳು, ಆಂದೋಲನಗಳು ಅನನ್ಯ. ಕೆಳವರ್ಗದಲ್ಲಿ ಜನಿಸಿದ ಜನರಿಗೆ ದೇವಸ್ಥಾನಗಳಲ್ಲಿ ಅನುಮತಿ ಕೊಡಲು ಅವರು ಬೇಡಲಿಲ್ಲ. ಹಿಂಸಾಚಾರದ ಚಳುವಳಿಗಳನ್ನೂ ನಡೆಸದೆ, ತಾವೇ ದೇವಾಲಯಗಳನ್ನು ಸ್ಥಾಪಿಸುವುದರ ಮೂಲಕ ಒಂದು ಹೊಸ-ಅನನ್ಯ-ಆಲೋಚನಾ ಕ್ರಮವನ್ನು ಹುಟ್ಟುಹಾಕಿದರು. ಕೇರಳದಾದ್ಯಂತ ಸುಮಾರು 60ಕ್ಕೂ ಹೆಚ್ಚು ದೇವಾಲಯಗಳನ್ನು ಅವರು ಸ್ಥಾಪಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ್ ಬೊಮ್ಮನಹಳ್ಳಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಜಿಲ್ಲಾ ವಾರ್ತಾಧಿಕಾರಿ ವಸಂತ ಬಿ.ಮಡ್ಲೂರ ಸೇರಿದಂತೆ ಸಮಾಜದ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾಧ್ಯಕ್ಷರೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಅತಿಥಿಗಳನ್ನು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬಾಹುಬಲಿ ಜೈನರ್ ಕಾರ್ಯಕ್ರಮ ನಿರ್ವಹಿಸಿದರು.
ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಅನಿತಾ ಶಿವಮೂರ್ತಪ್ಪ ಕುರ್ತಕೋಟಿ, ಮಂಜುನಾಥ ರಮೇಶ ಹುಲಕೋಟಿ, ಬಸವರಾಜ ಹನುಮಂತಪ್ಪ ಈಳಗೇರ ಅವರನ್ನು ಇದೇ ಸಂಧರ್ಭದಲ್ಲಿ ಸನ್ಮಾನಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಪ್ರಭು ಈಳಗೇರ, ಸಿಂಧು ಈಳಗೇರ, ಅರುಣ ಈಳಗೇರ, ಆನಂದ ಈಳಗೇರ, ಅಭಿಷೇಕ ಈಳಗೇರ, ಶೈಲಾ ಈಳಗೇರ, ಪೃಥ್ವಿ ಈಳಗೇರ, ಭೂಮಿಕಾ ಈಳಗೇರ, ಸಂಜನಾ ಈಳಗೇರ, ಬಸವರಾಜ ಈಳಗೇರ, ಸುಪ್ರಿಯಾ ಹೊಸಪೇಟೆ, ಸಮೃದ್ಧಿ ಹಾನಗಲ್, ಆಶಾ ಕುರ್ತಕೋಟಿ, ಅನನ್ಯ ಕುರ್ತಕೋಟಿ ಅವರುಗಳನ್ನು ಗೌರವಿಸಲಾಯಿತು.


