ವಿಜಯಸಾಕ್ಷಿ ಸುದ್ದಿ, ಗದಗ : ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2024 ಏಪ್ರೀಲ್ 1ರಿಂದ 2024ರ ಮೇ ಅಂತ್ಯದವರೆಗೂ ಗ್ರಾಮೀಣ ಭಾಗದ ಬಡ ಕುಟುಂಬಗಳ ಜೀವನೋಪಾಯದ ಭದ್ರತೆಯನ್ನು ಹೆಚ್ಚಿಸುವ ಮತ್ತು ಬೇಸಿಗೆಯಲ್ಲಿ ಸ್ಥಳೀಯವಾಗಿ ನಿರಂತರ ಉದ್ಯೋಗ ಒದಗಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ `ವಲಸೆ ಯಾಕ್ರಿ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ, ದುಡಿಮೆ ಖಾತ್ರಿ’ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯಡಿ ನೋಂದಾಯಿತ ಕುಟುಂಬದ ಕೂಲಿಕಾರರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಪ್ರಸಕ್ತ 2024-25ನೇ ಸಾಲಿಗೆ ಆಯುಕ್ತಾಲಯ ನಿಗದಿಪಡಿಸಿರುವ ಒಟ್ಟು 35 ಲಕ್ಷ ಮಾನವದಿನಗಳ ಗುರಿಗೆ ಅನುಗುಣವಾಗಿ ಗ್ರಾಮ ಪಂಚಾಯತಿಯಿಂದ ಗ್ರಾಮ ಸಭೆಗಳಲ್ಲಿ ಸಿದ್ಧಪಡಿಸಿ ಸಲ್ಲಿಸಿರುವ ಕಾಮಗಾರಿಗಳ ಗುಚ್ಛ (ಕ್ರಿಯಾ ಯೋಜನೆಗೆ) ಜಿಲ್ಲಾ ಪಂಚಾಯತಿಯಿಂದ ಒಟ್ಟು 29937 ಕಾಮಗಾರಿಗಳಿಗೆ ಫೆಬ್ರುವರಿ ಅಂತ್ಯದೊಳಗೆ ಅನುಮೋದನೆ ನೀಡಲಾಗಿದೆ. ಜಲ ಸಂಜೀವಿನಿ ಪರಿಕಲ್ಪನೆಯಡಿ ಮಧ್ಯಸ್ಥರದ ಕಾಮಗಾರಿಗಳನ್ನು ಅನುಷ್ಠಾನಿಸಿ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಮಾಡುವುದು ಪ್ರಮುಖ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ನೈಸರ್ಗಿಕ ನಿರ್ವಹಣಾ ಉಪಚಾರದ ಸಾಮೂಹಿಕ ಬದು ನಿರ್ಮಾಣ ಕೆರೆ/ಹಳ್ಳ/ಕಾಲುವೆ ಹೂಳೆತ್ತುವ, ಕಲ್ಲು ತಡೆ, ಕೃಷಿ ಹೊಂಡ, ಕೊಳವೆ ಭಾವಿ ಮರುಪೂರಣ ಘಟಕ, ನಾಲಾ ಅಭಿವೃದ್ಧಿ, ಸರ್ಕಾರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು, ಅರಣ್ಯೀಕರಣ, ರೇಷ್ಮೆ ಬೆಳೆ, ತೋಟಗಾರಿಕೆ, ಗೋಕಟ್ಟೆ ನಿರ್ಮಾಣ, ಶಾಲಾಭಿವೃದ್ಧಿ ಕಾಮಗಾರಿಗಳಾದ ಕಾಂಪೌಂಡ್, ಶೌಚಾಲಯ, ಅಡುಗೆ ಕೋಣೆಗಳಂತಹ ಕಾಮಗಾರಿಗಳನ್ನು ಅನುಷ್ಠಾನಿಸಿ ಗ್ರಾಮೀಣರಿಗೆ ಬಹುಬಾಳಿಕೆಯ ಆಸ್ತಿ ಸೃಜನೆಯ ಜೊತೆಗೆ ಅಕುಶಲ ಕೂಲಿಕಾರರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸಲು ಯೋಜನೆ ರೂಪಿಸಲಾಗಿದೆ.
ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಪ್ರಸಕ್ತ 2024 ಏಪ್ರೀಲ್ 1ರಿಂದ 2024 ಮೇ ಅಂತ್ಯದವರೆಗೂ ಅಭಿಯಾನವನ್ನು ಹಮ್ಮಿಕೊಂಡಿದ್ದು, ಬೇಸಿಗೆ ತಾಪ ಹೆಚ್ಚಾಗಿರುವ ಕಾರಣ ಗ್ರಾಮೀಣ ಕೂಲಿಕಾರರಿಗೆ ಸ್ಥಳೀಯವಾಗಿ ಉದ್ಯೋಗ ನೀಡಿ ಕೂಲಿ ಹಣವನ್ನು ಇ-ಎಫ್ಎಂಎಸ್ ಮುಖಾಂತರ ನೇರವಾಗಿ ವೈಯಕ್ತಿಕ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಹಾಗೂ ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ನೀಡುವುದರಿಂದ ಸದರಿ ಪ್ರಯೋಜನವನ್ನು ಉದ್ಯೋಗ ಚೀಟಿ ಹೊಂದಿರುವ ಗ್ರಾಮೀಣ ಕುಟುಂಬಗಳು ಪಡೆದುಕೊಳ್ಳಬಹುದು.
ಯೋಜನೆಯ ಐ.ಇ.ಸಿ ಚಟುವಟಿಕೆಗಳ ಮುಖಾಂತರ ಗ್ರಾಮೀಣ ಪ್ರದೇಶಗಳಲ್ಲಿನ ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಮಹಿಳೆಯರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸಲು ಅಗತ್ಯ ಕ್ರಮವಹಿಸಲಾಗಿದ್ದು, ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಬೆಸಿಗೆ ಕಾಲದಲ್ಲಿ ಗ್ರಾಮೀಣ ಜನರು ಉದ್ಯೋಗ ಬೇಡಿಕೆ ನೀಡಿದ ತಕ್ಷಣ ಸ್ಥಳೀಯವಾಗಿ ಉದ್ಯೋಗ ಒದಗಿಸಲು ಹಾಗೂ ಸಕಾಲದಲ್ಲಿ ಕೂಲಿ ಪಾವತಿ ಮಾಡಲು ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಅನುಷ್ಠಾನ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿರುವುದರಿಂದ ಅಕುಶಲ ಕೂಲಿ ಕಾರ್ಮಿಕರು ಸ್ಥಳೀಯವಾಗಿ ಉದ್ಯೋಗ ಪಡೆದುಕೊಳ್ಳುವುದು.
– ಭರತ್. ಎಸ್.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಗದಗ ಜಿ.ಪಂ.ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐ.ಇ.ಸಿ) ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾಯಕ ಬಂಧುಗಳ ಸಭೆ ಆಯೋಜಿಸಿ ಕ್ರಿಯಾಶೀಲವಲ್ಲದ ಉದ್ಯೋಗ ಚೀಟಿದಾರರನ್ನು ಒಳಗೊಂಡು ಕೂಲಿಕಾರರ ಸಂಘವನ್ನು ರಚಿಸಿ, ಅದಕ್ಕೆ ಒಬ್ಬ ಹೊಸ ಕಾಯಕ ಬಂಧುವನ್ನು ನೇಮಿಸಿ ಅವರುಗಳ ಮೂಲಕ ಕೂಲಿ ಬೇಡಿಕೆ ಪಡೆಯಲು ಗ್ರಾಮ ಪಂಚಾಯಿತಿಗಳ ವಾರ್ಡ್ಗಳಲ್ಲಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ವಿಶೇಷ ಅಭಿಯಾನಗಳನ್ನು ಆಯೋಜಿಸಿ ಕೂಲಿಕಾರರಿಂದ ಕೂಲಿ ಬೇಡಿಕೆ ಪಡೆದು, ಸಮಯಕ್ಕೆ ಸರಿಯಾಗಿ ಕೆಲಸ ಒದಗಿಸಲಾಗುತ್ತಿದೆ. ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.
– ಸಿ.ಬಿ. ದೇವರಮನೆ.
ಉಪ ಕಾರ್ಯದರ್ಶಿ, ಗದಗ ಜಿ.ಪಂ.