ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಬಿಂಕದಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಗದಗ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಮಾಣಿಕರಾವ್ ಪಾಟೀಲ್ ಹಾಗೂ ಗದಗ ತಾಲೂಕಿನ ಸಹಾಯಕ ನಿರ್ದೇಶಕ ಕುಮಾರ್ ಪೂಜಾರ್ (ಗ್ರಾ.ಉ) ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯ `ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ-ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ’ ಅಭಿಯಾನದಡಿ ಏಪ್ರಿಲ್ 1ರಿಂದ ಮೇ ಅಂತ್ಯದವರೆಗೆ ನರೇಗಾ ಯೋಜನೆಯಡಿ ನೋಂದಾಯಿತ ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡುವ ಬಗ್ಗೆ ಮಾಹಿತಿ ನೀಡಿದರು.
ನರೇಗಾ ಯೋಜನೆಯ ನಿಯಮಾನುಸಾರ ಕೂಲಿ ಕಾರ್ಮಿಕರು ಕೆಲಸ ನಿರ್ವಹಣೆ ಮಾಡಬೇಕು. ಹಾಜರಾತಿಯಲ್ಲಿ ಹೆಸರಿದ್ದು, ಕೆಲಸಕ್ಕೆ ಹಾಜರಾಗದೆ ಇದ್ದರೆ ಅಂಥವರ 100 ದಿನದ ಹಾಜರಾತಿಯಲ್ಲಿ ಹಾಜರಾತಿ ಕಡಿತಗೊಳ್ಳುವದು ಹಾಗೂ ಕೆಲಸದ ಪ್ರಮಾಣಕ್ಕೆ ತಕ್ಕಂತೆ ಕೂಲಿ ಮೊತ್ತ ಪಾವತಿಸಲಾಗುವದು. ಗಂಡು ಮತ್ತು ಹೆಣ್ಣಿಗೆ ಸಮಾನ ಕೂಲಿ ನೀಡಲಾಗುವುದು ಎಂದು ತಿಳಿಸಿದರು.
2024ರ ಲೋಕಸಭೆ ಚುನಾವಣೆಯ ಪ್ರಯುಕ್ತ ಕಾಮಗಾರಿ ಸ್ಥಳದಲ್ಲಿ ಹಾಜರಿದ್ದ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮತದಾರರು ಕೂಡ ಮತದಾನ ಮಾಡುವುದು ಅವರ ಆದ್ಯ ಕರ್ತವ್ಯವಾಗಿರುತ್ತದೆ. 18 ವರ್ಷ ತುಂಬುವ ಮತದಾರರಿಗೆ VHA Appನಲ್ಲಿ ನೋಂದಾಯಿಸಿಕೊಂಡು ಮತದಾರರಾಗಲು ಕರೆ ನೀಡಿದರು. ಮತದಾನ ಪ್ರಕ್ರಿಯೆಯಿಂದ ಯಾವೊಬ್ಬ ವ್ಯಕ್ತಿ ಕೂಡ ಹೊರಗುಳಿಯಬಾರದು ಎಂದು ತಿಳಿಸಿದರು.
ಪಿಡಿಓ ರೆಹಮತ್ ಬಾನು ಹಾಜರಿದ್ದ ಕೂಲಿಕಾರರಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸಿಬ್ಬಂದಿಗಳು, ತಾಲೂಕು ನರೇಗಾ ಸಿಬ್ಬಂದಿಗಳು, ನರೇಗಾ ನೋಂದಾಯಿತ ಕೂಲಿಕಾರರು ಹಾಜರಿದ್ದರು.