ವಿಜಯಸಾಕ್ಷಿ ಸುದ್ದಿ, ಗದಗ : ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಮಹಾಸಂಘದ ವತಿಯಿಂದ ಉತ್ತರಪ್ರದೇಶದ ವಾರಣಾಸಿ ಕೋಟಿ ಕೆಂಟ ಸ್ಥಿತ ಪ್ಲಾಜಾ ಹೋಟೆಲ್ನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತದ ಅರ್ಥವ್ಯವಸ್ಥೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಕೊಡುಗೆ ಕುರಿತು ಅಭಿಷೇಕ ನಿಗಮ್ ಹಾಗೂ ಅನ್ವರ್ ಶಿರಹಟ್ಟಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಸಮ್ಮೇಳನ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ದಕ್ಷಿಣ ಶಾಸಕರಾದ ಡಾ. ನೀಲಕಂಠ ತಿವಾರಿ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳು ಭಾರತದ ಅರ್ಥವ್ಯವಸ್ಥೆಯ ಭಾಗವಾಗಿದ್ದು, ಅಸಂಘಟಿತರಾಗಿದ್ದಾರೆ.
ದೇಶದ ಒಟ್ಟು ಜನಸಂಖ್ಯೆಯ ಒಂದು ಅತೀ ದೊಡ್ಡ ಭಾಗ ಬೀದಿ ಬದಿ ವ್ಯಾಪಾರಿಗಳಾಗಿದ್ದು, ಅವರ ಸಬಲೀಕರಣ ಮತ್ತು ಪೂರಕ ವಾತಾವರಣ ಕಲ್ಪಿಸುವ ಅಗತ್ಯವಿದೆ. ದೇಶದ ಅರ್ಥ ವ್ಯವಸ್ಥೆಯ ಶ್ರೇಯಸ್ಸು ಬೀದಿ ಬದಿ ವ್ಯಾಪಾರಿಗಳಿಗೆ ದೊರಕಬೇಕು ಎಂದು ಹೇಳಿದರು.
ಅನ್ವರ್ ಶಿರಹಟ್ಟಿ ಮಾತನಾಡಿ, ಪ್ರತಿ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಸಮ್ಮೇಳನಗಳನ್ನು ಆಯೋಜಿಸಿ ಸರಕಾರ ಗಮನ ಸೆಳೆಯುವ ಕಾರ್ಯವನ್ನು ಮಾಡಬೇಕಾಗಿದೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗಾಗಿ ಇರುವ ಯೋಜನೆಗಳ ಅನುಷ್ಠಾನ ಸಮಿತಿ ರಚನೆ ಮಾಡಬೇಕೆಂದರು.
ಈ ಸಮ್ಮೇಳನದಲ್ಲಿ 21 ರಾಜ್ಯಗಳಿಂದ ಬೀದಿ ಬದಿ ವ್ಯಾಪಾರಿಗಳ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿದ್ದರು.
ಹರಿದ್ವಾರದಿಂದ ಸಂಜಯ್ ಚೋಪಡಾ, ಕರ್ನಾಟಕದಿಂದ ಅನ್ವರ್ ಶಿರಹಟ್ಟಿ, ಮಹಮ್ಮದಗೌಸ್ ಸವನೂರ, ಓಡಿಸ್ಸಾದಿಂದ ಪ್ರೀತಮ್ ಸಿಂಗಂ, ಛತ್ತೀಸಗಡದಿಂದ ಅಲೋಕ ಪಾಂಡೆ, ದೆಹಲಿಯಿಂದ ಸಾಗರ ಯಾದವ, ಮಧ್ಯಪ್ರದೇಶದಿಂದ ಭೋಪಾಲ ಸಿಂಗ ಲೋದಿ, ಓಡಿಸ್ಸಾದಿಂದ ಮಹೇಶ ಬಲ್, ಬನಾರಸ್ದಿಂದ ಅಭಿಷೇಕ ನಿಗಮ್, ತೆಲಂಗಾಣದಿಂದ ಸತೀಶಗೌಡ, ಜಮಸೆಡಪುರದಿಂದ ಆದಿಲ್, ಗುಜರಾತದಿಂದ ಅಕ್ಷಿತಾ ಸೋಳಂಕಿ, ಪಶ್ಚಿಮ ಬಂಗಾಳ ಕಲ್ಕತ್ತಾದಿಂದ ಚಂದ್ರಕಲಾ ಪಾಂಡೆ, ಕಾನಪುರದಿಂದ ಸತ್ಯನಾರಾಯಣ ಜಿ, ಪ್ರಯಾಗರಾಜ್ನಿಂದ ಗಣೇಶ ಪ್ರಸಾದ ಗುಪ್ತಾ, ಲೀಲಾವತಿ ಮುಂತಾದವರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ರಾಜೇಂದ್ರ ಪ್ರಸಾದ ಸಿಂಗ್ ವಹಿಸಿದ್ದರು. ಹರಿಶಂಕರ ಸಿಂಗ್ ವಂದಿಸಿದರು.
ಫೆಡರೇಷನ್ ಆಫ್ ಫ್ರೀ ಟ್ರೇಡ್ ಯೂನಿಯನ್ ಆಫ್ ಇಂಡಿಯಾದ ಮಹಾ ಸಚಿವರಾದ ನೀರಜ್ ಚೌಬೆ ಮಾತನಾಡಿ, ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿ ಸಂಘಟನೆ ಮಾಹಾಸಂಘವು ದೇಶದ ಆಸಂಘಟಿತ ವಲಯದ ಒಂದು ಅತಿ ದೊಡ್ಡ, ಸರ್ವಶ್ರೇಷ್ಠ ಸಂಘಟನೆಯಾಗಿ ಹೊರಹೊಮ್ಮುತ್ತಿದೆ. ದೇಶದ 28 ರಾಜ್ಯಗಳಲ್ಲಿ 21 ರಾಜ್ಯ ಸಂಘಟನೆಗಳು ಮತ್ತು ಅದರ ಕೌಶಲ್ಯಯುತ ನಾಯಕರು ಮಹಾಸಂಘದಲ್ಲಿ ಕೈ ಜೋಡಿಸಿದ್ದಾರೆ. ಉಜ್ವಲ ಭವಿಷ್ಯಕ್ಕೆ ಕಾರಣಿಭೂತರಾಗಿದ್ದಾರೆ ಎಂದು ಹೇಳಿದರು.