ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: 2025-26ನೇ ಸಾಲಿನ ರಾಷ್ಟ್ರೀಯ ಖಾದ್ಯತೈಲ ಅಭಿಯಾನ ಯೋಜನೆಯಡಿ ಸೂರ್ಯಕಾಂತಿ (ಕೆ.ಬಿ.ಎಸ್.ಎಚ್-78) ತಳಿಯ ಕಿರುಚೀಲ ವಿತರಣೆ ಹಾಗೂ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಬುಧವಾರ ಜರುಗಿತು.
ಗದಗ ಕೃಷಿ ಇಲಾಖೆಯ ವತಿಯಿಂದ ಇಲ್ಲಿಯ ವಿರೂಪಾಕ್ಷೇಶ್ವರ ಪ್ರಾಂಗಣದಲ್ಲಿ ರೈತರಿಗೆ ಉಚಿತವಾಗಿ ಸೂರ್ಯಕಾಂತಿ ಬೀಜವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಅಧಿಕಾರಿ ಬಸವರಾಜೇಶ್ವರಿ ಸಜ್ಜನರ, ಎಣ್ಣೆಕಾಳು ಬೆಳೆಗಳ ವಿಸ್ತೀರ್ಣವನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅಟಲ್ ಭೂಜಲ ಯೋಜನೆಯಡಿ ಸೂಕ್ಷ್ಮ ನೀರಾವರಿ ಘಟಕಗಳು ಲಭ್ಯವಿದ್ದು, ನೀರಾವರಿ ಹಾಗೂ ಕೃಷಿ ಹೊಂಡ ಹೊಂದಿದ ಹಾಗೂ ಹಳ್ಳದ ಪಕ್ಕದಲ್ಲಿ ಜಮೀನು ಹೊಂದಿರುವ ರೈತರು, ಬೆಟಗೇರಿ ರೈತಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆಯಬೇಕೆಂದರು.
ಗದಗ ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಡಾ. ಎಂ.ಎಸ್. ಮಲ್ಲಾಪೂರ ಮಾತನಾಡಿ, ಕೃಷಿ ಇಲಾಖೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು.
ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ರಾಮಣ್ಣ ಹೂವಣ್ಣವರ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ ದೊಂಗಡೆ, ರೈತರಾದ ಚನ್ನಪ್ಪ ಹುಬ್ಬಳ್ಳಿ, ಶಂಕ್ರಪ್ಪ ಕುಂಬಾರ, ಮಂಜುನಾಥ ಸಜ್ಜನರ, ಅಂದಪ್ಪ ಮೆಣಸಿನಕಾಯಿ, ಪಂಚಪ್ಪ ಬಳಿಗೇರ, ಶಿವು ಟೆಂಗಿನಕಾಯಿ, ಬುದ್ದಿವಂತಪ್ಪ ಹಡಗಲಿ ಮುಂತಾದವರು ಉಪಸ್ಥಿತರಿದ್ದರು.