ವಿಶಾಖಪಟ್ಟಣಂ: ನೌಕಾಪಡೆಯ ಸಿಬ್ಬಂದಿಯೊಬ್ಬನು ತನ್ನ ಪ್ರೇಯಸಿಯನ್ನು ಕೊಲೆ ಮಾಡಿ, ದೇಹವನ್ನು ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿ ಇರಿಸಿದ ಹೃದಯ ಕಲುಕುವ ಘಟನೆ ನಡೆದಿದೆ.
ಆರೋಪಿಯನ್ನು ಚಿಂತಾದ ರವೀಂದ್ರ (35) ಎಂದು ಗುರುತಿಸಲಾಗಿದ್ದು, ರವೀಂದ್ರ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಎಂದು ತಿಳಿದುಬಂದಿದೆ. ಮೃತಳನ್ನು ಮೌನಿಕಾ (29) ಎಂದು ಗುರುತಿಸಲಾಗಿದೆ.
ಪತ್ನಿ ತವರು ಮನೆಗೆ ತೆರಳಿದ್ದ ಸಂದರ್ಭದಲ್ಲಿ ರವೀಂದ್ರ ತನ್ನ ಪ್ರೇಯಸಿ ಮೌನಿಕಾಳನ್ನು ಮನೆಗೆ ಕರೆಸಿಕೊಂಡಿದ್ದಾನೆ. ಕೆಲವು ಸಮಯ ಒಟ್ಟಿಗೆ ಕಳೆದ ಬಳಿಕ ಇಬ್ಬರ ನಡುವೆ ವಾಗ್ವಾದ ಉಂಟಾಗಿ, ಕೋಪದ ಆವೇಶದಲ್ಲಿ ರವೀಂದ್ರ ಮೌನಿಕಾಳನ್ನು ಕೊಲೆ ಮಾಡಿದನು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಬಳಿಕ ಆತ ದೇಹವನ್ನು ತುಂಡುಗಳಾಗಿ ಕತ್ತರಿಸಿ, ಕೆಲವು ಭಾಗಗಳನ್ನು ಚೀಲದಲ್ಲಿ ತುಂಬಿ ವಿಲೇವಾರಿ ಮಾಡಿದ್ದಾನೆ. ಉಳಿದ ಭಾಗಗಳನ್ನು ಮನೆಯಲ್ಲಿರುವ ಫ್ರಿಡ್ಜ್ನಲ್ಲಿ ಇರಿಸಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
2021ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ರವೀಂದ್ರ ಮತ್ತು ಮೌನಿಕಾ ಪರಿಚಯವಾಗಿ ಸ್ನೇಹ ಬೆಳೆಸಿಕೊಂಡಿದ್ದರು. ಮೌನಿಕಾ ತನ್ನಿಂದ ಹಣ ಪಡೆದು, ಸಂಬಂಧವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂಬ ಕಾರಣಕ್ಕೆ ಈ ಕೊಲೆ ನಡೆದಿದೆ ಎಂದು ಆರೋಪಿಯು ಪೊಲೀಸರಿಗೆ ಹೇಳಿದ್ದಾನೆ.
ಘಟನೆ ಬಳಿಕ ರವೀಂದ್ರ ಸ್ವಯಂವಾಗಿ ಪೊಲೀಸ್ ಠಾಣೆಗೆ ತೆರಳಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮನೆಯಲ್ಲಿ ಹಾಗೂ ಫ್ರಿಡ್ಜ್ನಲ್ಲಿ ದೇಹದ ತುಂಡುಗಳನ್ನು ಪತ್ತೆ ಹಚ್ಚಿದ್ದಾರೆ. ಆದರೆ ಮೌನಿಕಾಳ ತಲೆ ಕಾಣೆಯಾಗಿದ್ದು, ಅದನ್ನು ಬೇರೆಡೆ ವಿಲೇವಾರಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕಾಣೆಯಾದ ದೇಹದ ಭಾಗಗಳನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



